'ಹಣ ದುರ್ಬಳಕೆ': ಗುಜರಾತ್ ಪೊಲೀಸರ ತನಿಖೆಗೆ ಸಹಕರಿಸಲು ತೀಸ್ತಾ ಸೆಟಲ್ವಾಡ್, ಆಕೆಯ ಪತಿಗೆ 'ಸುಪ್ರೀಂ' ನಿರ್ದೇಶನ

ಹಣ ದುರುಪಯೋಗದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಗುಜರಾತ್ ಪೊಲೀಸರಿಗೆ ಸಹಕಾರ ನೀಡುವಂತೆ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ತೀಸ್ತಾ ಸೆಟಲ್ವಾಡ್
ತೀಸ್ತಾ ಸೆಟಲ್ವಾಡ್

ನವದೆಹಲಿ: ಹಣ ದುರುಪಯೋಗದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಗುಜರಾತ್ ಪೊಲೀಸರಿಗೆ ಸಹಕಾರ ನೀಡುವಂತೆ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

ಇವರಿಬ್ಬರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಎಂದು ಹೇಳಿದ ಬಳಿಕ ನ್ಯಾಯಮೂರ್ತಿ ಎಸ್‌ಕೆ ಕೌಲ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.

'ಪ್ರಕರಣದಲ್ಲಿ ಚಾರ್ಜ್ ಶೀಟ್ ಇನ್ನೂ ಸಲ್ಲಿಕೆಯಾಗಿಲ್ಲ. ಸಹಕಾರದ ಕೊರತೆಯ ಅಂಶವಿದೆ ಎಂದು ಎಎಸ್‌ಜಿ ಹೇಳಿದೆ. ಅದಿರಲಿ, ಪ್ರತಿವಾದಿಗಳು ಅಗತ್ಯವಿರುವಾಗ ತನಿಖೆಗೆ ಸಹಕರಿಸುತ್ತಾರೆ' ಎಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ವಿಲೇವಾರಿ ಮಾಡುವಾಗ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಿಕೆ ಮಿಶ್ರಾ ಅವರನ್ನೊಳಗೊಂಡ ಪೀಠವು ಹೇಳಿದೆ. 

2019ರ ಫೆಬ್ರುವರಿ 8ರಲ್ಲಿ ನಿರೀಕ್ಷಣಾ ಜಾಮೀನು ನೀಡುವ ವಿಚಾರಣೆಯ ಸಂದರ್ಭದಲ್ಲಿ ಗುಜರಾತ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಮಾಡಿದ ಕೆಲವು ಟೀಕೆಗಳನ್ನು ಅಳಿಸಿಹಾಕುವಂತೆ ಕೋರಿ ತೀಸ್ತಾ ಸೆಟಲ್ವಾಡ್ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದೆ.

'ಜಾಮೀನು ನೀಡುವ ಹಂತದಲ್ಲಿ ಮಾಡಿದ ಯಾವುದೇ ಅವಲೋಕನವು ಆ ಪ್ರಕರಣದ ವಿಚಾರಣೆಯ ಮೇಲೆ ಯಾವುದೇ ಗಮನಾರ್ಹ ಪ್ರಭಾವ ಬೀರುವುದಿಲ್ಲ. ಇದೊಂದು ಸವಕಲು ವಾದವಾಗಿದ್ದು, ನಾವು ಇದಕ್ಕಿಂತ ಹೆಚ್ಚಿನ ವಿವರಣೆ ನೀಡುವ ಅಗತ್ಯವಿಲ್ಲ'  ಎಂದು ಪೀಠ ತಿಳಿಸಿದೆ. 

2008 ಮತ್ತು 2013ರ ನಡುವೆ ತಮ್ಮ ಎನ್‌ಜಿಒ ಸಬ್ರಂಗ್ ಟ್ರಸ್ಟ್ ಮೂಲಕ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ 'ವಂಚನೆಯಿಂದ' ಕೇಂದ್ರ ಸರ್ಕಾರದಿಂದ 1.4 ಕೋಟಿ ರೂ. ಅನುದಾನವನ್ನು ಪಡೆದಿದ್ದಾರೆ ಎಂಬ ದೂರಿನ ಮೇರೆಗೆ ಅಹಮದಾಬಾದ್ ಕ್ರೈಂ ಬ್ರಾಂಚ್ ಹಣ ದುರುಪಯೋಗದ ಪ್ರಕರಣವನ್ನು ದಾಖಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com