ಹೈದರಾಬಾದ್: ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಮತ್ತು ಕಾಂಗ್ರೆಸ್ಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ವೈಎಸ್ಆರ್ ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು ಶುಕ್ರವಾರ ಘೋಷಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವೈಎಸ್ಆರ್ಟಿಪಿ ಮುಖ್ಯಸ್ಥೆ, ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ಗೆ ಲಾಭವಾಗುವುದನ್ನು ತಪ್ಪಿಸಲು ಮತ್ತು ಚುನಾವಣೆಯಲ್ಲಿ ಮತಗಳ ವಿಭಜನೆಯನ್ನು ತಡೆಯಲು ಕಾಂಗ್ರೆಸ್ಗೆ ಬೆಂಬಲ ನೀಡುತ್ತಿರುವುದಾಗಿ ಎಂದು ಹೇಳಿದ್ದಾರೆ.
"ನಿಮಗೆ ತಿಳಿದಿರುವಂತೆ ತೆಲಂಗಾಣ ರಾಜ್ಯವು ಈ ತಿಂಗಳ ಕೊನೆಯ ದಿನದಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನಿರ್ಣಾಯಕ ಹಂತದಲ್ಲಿದೆ. ತೆಲಂಗಾಣದ ಜನ ಕೆಸಿಆರ್ ಅವರ ದುರಾಡಳಿತದಿಂದ ಬೇಸತ್ತಿದ್ದಾರೆ ಮತ್ತು ಅವರ ಕೆಟ್ಟ ಆಡಳಿತವನ್ನು ತೆಗೆದುಹಾಕಲು ಸಿದ್ಧರಾಗಿದ್ದಾರೆ ಎಂದು ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ 10 ವರ್ಷಗಳಲ್ಲಿ ಒಂದು ಕುಟುಂಬದ ದುರಾಸೆ ಮತ್ತು ದಬ್ಬಾಳಿಕೆಯಿಂದಾಗಿ ತೆಲಂಗಾಣದ ಸಂಪತ್ತು ಹೇಗೆ ಹರಿದುಹೋಗಿದೆ ಎಂಬುದನ್ನು ಜನ ನೋಡಿದ್ದಾರೆ. ರಾಜ್ಯ ರಚನೆಯ ಸಮಯದಲ್ಲಿ ಶ್ರೀಮಂತ ರಾಜ್ಯವಾಗಿದ್ದ ತೆಲಂಗಾಣ ಕೆಸಿಆರ್ ಮತ್ತು ಅವರ ಆಪ್ತರ ಭ್ರಷ್ಟಾಚಾರದಿಂದಾಗಿ ಈಗ ಭಾರೀ ಸಾಲದ ಸುಳಿಗೆ ಸಿಲುಕಿದೆ ಎಂದು ಶರ್ಮಿಳಾ ಆರೋಪಿಸಿದ್ದಾರೆ.
Advertisement