ಲಖನೌ: ಝಾನ್ಸಿ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್ಕೌಂಟರ್ನಲ್ಲಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ(ಎಸ್ಟಿಎಫ್) ಕುಖ್ಯಾತ ಕ್ರಿಮಿನಲ್ ರಶೀದ್ ಕಾಲಿಯಾನನ್ನು ಹತ್ಯೆ ಮಾಡಿದೆ.
ಕಾಲಿಯಾ 40 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪೊಲೀಸರು ಆತನ ತಲೆಗೆ 1.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು.
ಕಾಲಿಯಾ ಕೊಲೆ, ಕೊಲೆ ಯತ್ನ, ಅಪಹರಣ, ವಂಚನೆ, ಸುಲಿಗೆ, ಬೆದರಿಕೆ ಇತ್ಯಾದಿ ಆರೋಪಗಳನ್ನು ಎದುರಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸ್ ಮೂಲಗಳ ಪ್ರಕಾರ, ಕಾಲಿಯಾ ಝಾನ್ಸಿ ಜಿಲ್ಲೆಯ ಮೌರಾನಿಪುರದಲ್ಲಿ ಸುಪಾರಿ ಹತ್ಯೆಗಾಗಿ ಆಗಮಿಸಿದ್ದ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.
ಮೌರಾನಿಪುರದಲ್ಲಿ ಕಾಲಿಯಾ ಇರುವಿಕೆಯ ಬಗ್ಗೆ ಸುಳಿವು ಪಡೆದು ತಕ್ಷಣ ಸ್ಥಳಕ್ಕೆ ಆಗಮಿಸಿದ ಯುಪಿ ಎಸ್ಟಿಎಫ್ ಗುಂಡಿನ ದಾಳಿ ನಡೆಸಿದೆ. ಗುಂಡಿನ ಚಕಮಕಿಯಲ್ಲಿ, ಕಾಲಿಯಾ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಕಾಲಿಯಾ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ, ಡೆಪ್ಯುಟಿ ಎಸ್ಪಿ ಮತ್ತು ಇನ್ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಯೊಬ್ಬರಿಗೆ ಗಾಯಗಳಾಗಿವೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement