ರಾಹುಲ್ ಗಾಂಧಿ ಪ್ರಬಲ ಹೋರಾಟಗಾರ, ಅವರು ಪ್ರಾಮಾಣಿಕ ಉತ್ತರ ನೀಡಲಿದ್ದಾರೆ: ಸುಪ್ರಿಯಾ ಸುಳೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಹೋರಾಟಗಾರನಾಗಿದ್ದು, ಚುನಾವಣಾ ಆಯೋಗದ ನೋಟಿಸ್‌ಗೆ ಗೌರವಯುತ ಮತ್ತು ಪ್ರಾಮಾಣಿಕವಾಗಿ ಉತ್ತರ ನೀಡಲಿದ್ದಾರೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.
ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಹೋರಾಟಗಾರನಾಗಿದ್ದು, ಚುನಾವಣಾ ಆಯೋಗದ ನೋಟಿಸ್‌ಗೆ ಗೌರವಯುತ ಮತ್ತು ಪ್ರಾಮಾಣಿಕವಾಗಿ ಉತ್ತರ ನೀಡಲಿದ್ದಾರೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಹುಲ್ ಅವರು ಪ್ರಾಮಾಣಿಕ ಉತ್ತರವನ್ನು ನೀಡುತ್ತಾರೆ ಎಂದು ನನಗೆ ವಿಶ್ವಾಸವಿದೆ. ಅವರು ಪ್ರಾಮಾಣಿಕರಾಗಿರುವುದರಿಂದ ನಿರ್ಭೀತಿಯಿಂದ ಇರುತ್ತಾರೆ’ ಎಂದು ಸುಪ್ರಿಯಾ ಸುಳೆ ತಿಳಿಸಿದ್ದಾರೆ.

ಬಿಜೆಪಿಗರು ಜವಾಹರಲಾಲ್ ನೆಹರೂ ಕುಟುಂಬದ ಬಗ್ಗೆ ಮಾತನಾಡಿದ ಹಲವು ಉದಾಹರಣೆಗಳಿವೆ. ಹಾಗಾಗಿ ಅವರು (ಬಿಜೆಪಿಗರು) ಏನಾದರೂ ಮಾತನಾಡಿದರೆ ಬೇಸರಗೊಳ್ಳುವ ಅಗತ್ಯವೇನಿದೆ ಎಂದು ಸುಪ್ರಿಯಾ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ‘ಪನೌತಿ’ (ಅಪಶಕುನ) ಎಂದು ಹೇಳಿದ್ದಕ್ಕಾಗಿ ಹಾಗೂ ಮೋದಿ ಅವರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ‘ಜೇಬುಗಳ್ಳತನ’ದ ಬಗ್ಗೆ ಉಲ್ಲೇಖಿಸಿದ್ದಕ್ಕಾಗಿ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ.

ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಬಿಜೆಪಿಯವರು ರಾಹುಲ್ ಗಾಂಧಿಯವರ ಕುಟುಂಬದ ವಿರುದ್ಧ ಮಾತನಾಡಿರುವ ಹಲವಾರು ನಿದರ್ಶನಗಳಿವೆ. ಈಗ ಅವರೇನಾದರೂ ಮಾತನಾಡಿದರೆ, ಅದರ ಬಗ್ಗೆ ಬೇಸರಿಸಿಕೊಳ್ಳುವ ಅಗತ್ಯವೇನಿದೆ? ಅವರು (ಬಿಜೆಪಿ) ರಾಹುಲ್ ಗಾಂಧಿಯವರ ಮುತ್ತಾತನ ವಿರುದ್ಧವೂ ಮಾತನಾಡಿದ್ದಾರೆ” ಎಂದು ಕಿಡಿ ಕಾರಿದ್ದಾರೆ.

ಚುನಾವಣಾ ಸಮಾವೇಶವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರಾಹುಲ್ ಗಾಂಧಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ದೂರನ್ನು ಆಧರಿಸಿ ಭಾರತೀಯ ಚುನಾವಣಾ ಆಯೋಗವು ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ರಾಹುಲ್ ಅವರ ಮಾತುಗಳು ಹಿರಿಯ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿಯು ಆಯೋಗಕ್ಕೆ ದೂರು ಸಲ್ಲಿಸಿತ್ತು. ರಾಜಕೀಯ ವಿರೋಧಿಗಳನ್ನು ಉದ್ದೇಶಿಸಿ ಆಧಾರವಿಲ್ಲದೆ ಮಾತನಾಡುವುದು ನೀತಿ ಸಂಹಿತೆಗೆ ವಿರುದ್ಧ ಎಂದು ಆಯೋಗವು ರಾಹುಲ್ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com