ನೇಪಾಳ: ಒಂದು ಗಂಟೆಯಲ್ಲಿ 4 ಪ್ರಬಲ ಭೂ ಕಂಪನ; ದೆಹಲಿ, ಎನ್ ಸಿಆರ್ ಸೇರಿ ಉತ್ತರ ಭಾರತದ ಹಲವೆಡೆ ಕಂಪಿಸಿದ ಭೂಮಿ

ನೆರೆಯ ನೇಪಾಳದಲ್ಲಿ ಇಂದು ಪ್ರಬಲ ಭೂಕಂಪನ ಸಂಭವಿಸಿದ್ದು, ಕೇವಲ ಒಂದು ಗಂಟೆ ಅವಧಿಯಲ್ಲಿ ಸತತ 4 ಭೂಕಂಪನಗಳು ವರದಿಯಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನೆರೆಯ ನೇಪಾಳದಲ್ಲಿ ಇಂದು ಪ್ರಬಲ ಭೂಕಂಪನ ಸಂಭವಿಸಿದ್ದು, ಕೇವಲ ಒಂದು ಗಂಟೆ ಅವಧಿಯಲ್ಲಿ ಸತತ 4 ಭೂಕಂಪನಗಳು ವರದಿಯಾಗಿವೆ.

ಪಶ್ಚಿಮ ನೇಪಾಳದಲ್ಲಿ 10 ಕಿಲೋಮೀಟರ್ ಆಳದಲ್ಲಿ ಮಧ್ಯಾಹ್ನ 2:25 ಕ್ಕೆ 4.6 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದೆ, ನಂತರ ಮೊದಲ ಕಂಪನ ಸಂಭವಿಸಿದ 25 ನಿಮಿಷಗಳಲ್ಲಿ ಅಂದರೆ 2:51 ಕ್ಕೆ 6.2 ತೀವ್ರತೆಯ 2ನೇ ಕಂಪನ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ನೇಪಾಳದ Lat: 29.39 ಮತ್ತು Long: 81.23ರಲ್ಲಿ 5 ಕಿ.ಮೀ ಆಳದಲ್ಲಿ ಕೇಂದ್ರಬಿಂದು ದಾಖಲಾಗಿತ್ತು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ಮಂಗಳವಾರ ತಿಳಿಸಿದೆ.

ಇದಾದ ಬಳಿಕ ಮತ್ತೆ ಅರ್ಧ ಗಂಟೆಯ ಅವಧಿಯಲ್ಲಿ ಇನ್ನೂ ಎರಡುಕಂಪನಗಳು ದಾಖಲಾಗಿದ್ದು, ಮಧ್ಯಾಹ್ನ 3:06ರಲ್ಲಿ 3.6 ತೀವ್ರತೆಯೊಂದಿಗೆ 15ಕಿಮೀ ಆಳದಲ್ಲಿ 3ನೇ ಕಂಪನ ದಾಖಲಾಗಿದೆ. ಇದಾದ ಕೇಲವೇ ನಿಮಿಷಗಳ ಅಂತರದಲ್ಲಿ 4ನೇ ಕಂಪನ 3.1 ತೀವ್ರತೆಯಲ್ಲಿ 10 ಕಿಮೀ ಅಳದಲ್ಲಿ ದಾಖಲಾಗಿದೆ. ಈ ನಾಲ್ಕು ಭೂಕಂಪನಗಳು ನೇಪಾಳದಲ್ಲಿ ವ್ಯಾಪಕ ಭೀತಿ ಉಂಟು ಮಾಡಿದ್ದು, ಪ್ರಬಲ ಭೂಕಂಪನದ ಕೇಂದ್ರಬಿಂದು ಉತ್ತರಾಖಂಡದ ಜೋಶಿಮಠದ ಆಗ್ನೇಯಕ್ಕೆ 206 ಕಿಮೀ ಮತ್ತು ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಉತ್ತರಕ್ಕೆ 284 ಆಗಿದೆ.

ನೇಪಾಳ ಮಾತ್ರವಲ್ಲದೇ ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಕಂಪನಗಳು ದಾಖಲಾಗಿದೆ. ಎರಡನೇ ಭೂಕಂಪದ ನಂತರ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಜನರು ಪ್ರಬಲವಾದ ಕಂಪನಗಳನ್ನು ವರದಿ ಮಾಡಿದ್ದಾರೆ ಮತ್ತು ತಮ್ಮ ಕಚೇರಿಗಳು ಮತ್ತು ಬಹುಮಹಡಿ ವಸತಿ ಕಟ್ಟಡಗಳಿಂದ ಹೊರಬಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು ಗಾಬರಿಪಡಬೇಡಿ ಎಂದು ಮನವಿ ಮಾಡಿದ್ದಾರೆ. "ನೀವೆಲ್ಲರೂ ಸುರಕ್ಷಿತವಾಗಿರುತ್ತೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಿಮ್ಮ ಕಟ್ಟಡಗಳಿಂದ ಸುರಕ್ಷಿತ ಸ್ಥಳಕ್ಕೆ ಬನ್ನಿ, ಆದರೆ ಗಾಬರಿಯಾಗಬೇಡಿ. ಎಲಿವೇಟರ್‌ಗಳನ್ನು ಬಳಸಬೇಡಿ! ಯಾವುದೇ ತುರ್ತು ಸಹಾಯಕ್ಕಾಗಿ, 112 ಅನ್ನು ಡಯಲ್ ಮಾಡಿ" ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂತೆಯೇ ಚಂಡೀಗಢ, ಜೈಪುರ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಕಂಪನದಿಂದಾದ ನಷ್ಟದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ ಎಂದು ಗುಲಾಬಿ ನಗರದ ಪೊಲೀಸ್ ನಿಯಂತ್ರಣ ಕೊಠಡಿ ತಿಳಿಸಿದೆ.

ನೇಪಾಳವು ಪ್ರಪಂಚದ ಅತ್ಯಂತ ಸಕ್ರಿಯವಾದ ಟೆಕ್ಟೋನಿಕ್ ವಲಯಗಳಲ್ಲಿ ಒಂದಾಗಿದೆ (ಭೂಕಂಪನ ವಲಯ IV ಮತ್ತು V), ದೇಶವು ಭೂಕಂಪಗಳಿಗೆ ಅತ್ಯಂತ ದುರ್ಬಲವಾಗಿದೆ. USನ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಏಪ್ರಿಲ್ 25, 2015 ರಂದು ನೇಪಾಳದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿ 8,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 21,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com