ಮುಂಬೈ: ನಾಂದೇಡ್ ಮತ್ತು ಛತ್ರಪತಿ ಸಂಭಾಜಿನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ಬಾಂಬೆ ಹೈಕೋರ್ಟ್ ಬುಧವಾರ ಸ್ವಯಂ ಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಮಹಾರಾಷ್ಟ್ರ ಸರ್ಕಾರದಿಂದ ವಿವರಗಳನ್ನು ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರ ವಿಭಾಗೀಯ ಪೀಠವು, ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಅವರಿಗೆ ಆರೋಗ್ಯ ಕ್ಷೇತ್ರಕ್ಕಾಗಿ ಮೀಸಲಿಟ್ಟಿರುವ ರಾಜ್ಯದ ಬಜೆಟ್ ಹಂಚಿಕೆಯ ವಿವರಗಳನ್ನು ಪೀಠಕ್ಕೆ ಸಲ್ಲಿಸುವಂತೆ ಗುರುವಾರ ಕೇಳಿದೆ.
ಇದಕ್ಕೂ ಮುನ್ನ ವಕೀಲ ಮೋಹಿತ್ ಖನ್ನಾ ಒಂದು ಪತ್ರ ಬರೆದು, ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಸಾವಿನ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದರು. ಪೀಠವು ಆರಂಭದಲ್ಲಿ ಖನ್ನಾ ಅವರಿಗೆ ಅರ್ಜಿ ಸಲ್ಲಿಸಲು ಸೂಚಿಸಿತು ಮತ್ತು ಪರಿಣಾಮಕಾರಿ ಆದೇಶಗಳನ್ನು ನೀಡಲು ಬಯಸಿದೆ ಎಂದು ಹೇಳಿತ್ತು.
ಆಸ್ಪತ್ರೆಗಳಲ್ಲಿನ ಖಾಲಿ ಹುದ್ದೆಗಳು, ಔಷಧಿಗಳ ಲಭ್ಯತೆ, ಸರ್ಕಾರವು ಖರ್ಚು ಮಾಡುತ್ತಿರುವ ಶೇಕಡಾವಾರು (ನಿಧಿ) ಮತ್ತು ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಂತೆ ವಕೀಲರನ್ನು ಕೇಳಿದೆ.
ಆದಾಗ್ಯೂ, ಮಧ್ಯಾಹ್ನದ ವಿಚಾರಣೆ ವೇಳೆಯಲ್ಲಿ, ಬೆಡ್ಗಳು, ಸಿಬ್ಬಂದಿ ಮತ್ತು ಅಗತ್ಯ ಔಷಧಿಗಳ ಕೊರತೆಯನ್ನು ಉಲ್ಲೇಖಿಸಿ ಆಸ್ಪತ್ರೆಗಳಲ್ಲಿ ವೈದ್ಯರು ನೀಡಿದ ಕಾರಣಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸೂಚಿಸಿದ ಪೀಠವು, ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.
ಈ ಕುರಿತು ಗುರುವಾರ ಮುಂದಿನ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಹೇಳಿದೆ.
ಖನ್ನಾ ಅವರು ತಮ್ಮ ಪತ್ರದಲ್ಲಿ ಶಿಶುಗಳು ಸೇರಿದಂತೆ 31 ಸಾವುಗಳು ನಾಂದೇಡ್ನ ಡಾ. ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 30 ರಿಂದ 48 ಗಂಟೆಗಳ ಅವಧಿಯಲ್ಲಿ ವರದಿಯಾಗಿವೆ.
ಛತ್ರಪತಿ ಸಂಭಾಜಿನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಕ್ಟೋಬರ್ 2 ಮತ್ತು 3ರ ನಡುವೆ ಶಿಶುಗಳು ಸೇರಿದಂತೆ 18 ರೋಗಿಗಳ ಸಾವಿಗೀಡಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
Advertisement