ಮುಂದಿನ ಎರಡು ವರ್ಷಗಳಲ್ಲಿ ದೇಶದಿಂದ ನಕ್ಸಲಿಸಂ ನಿರ್ಮೂಲನೆ: ಕೇಂದ್ರ ಸಚಿವ ಅಮಿತ್ ಶಾ

ಎಡಪಂಥೀಯ ಉಗ್ರವಾದ (ಎಲ್‌ಡಬ್ಲ್ಯುಇ) ಮಾನವೀಯತೆಗೆ ಮಾರಕವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಅದನ್ನು ದೇಶದಿಂದ ನಿರ್ಮೂಲನೆ ಮಾಡಲು ಸರ್ಕಾರ ದೃಢಸಂಕಲ್ಪ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ. 
ಎಲ್‌ಡಬ್ಲ್ಯುಇ ಪೀಡಿತ ರಾಜ್ಯಗಳ ಭದ್ರತಾ ಪರಿಸ್ಥಿತಿ ಅವಲೋಕನದ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ
ಎಲ್‌ಡಬ್ಲ್ಯುಇ ಪೀಡಿತ ರಾಜ್ಯಗಳ ಭದ್ರತಾ ಪರಿಸ್ಥಿತಿ ಅವಲೋಕನದ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ

ನವದೆಹಲಿ: ಎಡಪಂಥೀಯ ಉಗ್ರವಾದ (ಎಲ್‌ಡಬ್ಲ್ಯುಇ) ಮಾನವೀಯತೆಗೆ ಮಾರಕವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಅದನ್ನು ದೇಶದಿಂದ ನಿರ್ಮೂಲನೆ ಮಾಡಲು ಸರ್ಕಾರ ದೃಢಸಂಕಲ್ಪ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ. 

ಎಲ್‌ಡಬ್ಲ್ಯುಇ ಪೀಡಿತ ರಾಜ್ಯಗಳ ಭದ್ರತಾ ಪರಿಸ್ಥಿತಿ ಅವಲೋಕನದ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಎಲ್‌ಡಬ್ಲ್ಯುಇ ಅನ್ನು ನಿರ್ಮೂಲನೆಗೊಳಿಸುವಲ್ಲಿ ಗಣನೀಯ ಪ್ರಗತಿ ಕಂಡಿದೆ ಎಂದು ಶಾ ಒತ್ತಿ ಹೇಳಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ನಕ್ಸಲ್ ಪೀಡಿತ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಭದ್ರತಾ ಪಡೆಗಳ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಶಾ, ಕಳೆದ ನಾಲ್ಕು ದಶಕಗಳಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆಯ ಹಿಂಸಾತ್ಮಕ ಘಟನೆಗಳು ಮತ್ತು ಸಾವುಗಳಿಗೆ ದೇಶ ಸಾಕ್ಷಿಯಾಗಿದೆ ಎಂದರು. 

2010ಕ್ಕೆ ಹೋಲಿಸಿದರೆ 2022ರಲ್ಲಿ ಹಿಂಸಾತ್ಮಕ ಘಟನೆಗಳು ಶೇ 77ಕ್ಕೆ ಇಳಿಕೆಯಾಗಿದೆ ಎಂದು ಸಭೆಯ ಪೂರ್ವ ವರದಿಗಳು ಸೂಚಿಸಿವೆ. 2019ರಿಂದ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು 195 ಹೊಸ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಶಿಬಿರಗಳು ಮತ್ತು 44 ಹೆಚ್ಚುವರಿ ಶಿಬಿರಗಳನ್ನು ಸ್ಥಾಪಿಸುವ ಯೋಜನೆಯನ್ನು ಶಾ ಬಹಿರಂಗಪಡಿಸಿದರು. 

ಎಡಪಂಥೀಯ ಉಗ್ರವಾದದಿಂದ ವಿಮೋಚನೆಗೊಂಡ ಪ್ರದೇಶಗಳಲ್ಲಿ ಮತ್ತೆ ಆ ಚಟುವಟಿಕೆಗಳು ನಡೆಯುವುದನ್ನು ತಡೆಗಟ್ಟಲು ನಿರಂತರ ಕಣ್ಗಾವಲಿನ ಅಗತ್ಯವಿದೆ. 2005 ರಿಂದ 2024 ರವರೆಗಿನ ಅವಧಿಗೆ ಹೋಲಿಸಿದರೆ 2014 ರಿಂದ 2023 ರವರೆಗೆ ಭದ್ರತಾ ಪಡೆಗಳ ಸಾವಿನಲ್ಲಿ ಶೇ 69 ರಷ್ಟು ಇಳಿಕೆಯಾಗಿದೆ ಮತ್ತು ನಾಗರಿಕರ ಸಾವಿನಲ್ಲಿ ಶೇ 68 ರಷ್ಟು ಇಳಿಕೆಯಾಗಿದೆ. ಎಲ್‌ಡಬ್ಲ್ಯುಇ ಪೀಡಿತ ರಾಜ್ಯಗಳಲ್ಲಿ ಎಡಪಂಥೀಯ ಉಗ್ರವಾದಕ್ಕೆ ಹಣಕಾಸಿನ ನೆರವು ನೀಡುವುದನ್ನು ತನಿಖೆ ಮಾಡಲು ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ತಂಡಗಳನ್ನು ರಚಿಸುವ ಮೂಲಕ ಸಹಕರಿಸುವಂತೆ ಅವರು ಒತ್ತಾಯಿಸಿದರು.

2017ರಲ್ಲಿ ಎಲ್‌ಡಬ್ಲ್ಯುಇ ಸಂತ್ರಸ್ತರಿಗೆ ನೀಡುವ ಪರಿಹಾರದ ಮೊತ್ತವನ್ನು 5 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಮತ್ತು ಈಗ 40 ಲಕ್ಷ ರೂ.ಗೆ ಏರಿಕೆಯಾಗಿದೆ. ಎಲ್‌ಡಬ್ಲ್ಯುಇ ಪೀಡಿತ ಜಿಲ್ಲೆಗಳಲ್ಲಿ ವಿಶೇಷ ಕೇಂದ್ರ ಸಹಾಯ ಯೋಜನೆಯಡಿ 14,000ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಈ ಪೈಕಿ 80 ಪ್ರತಿಶತದಷ್ಟು ಪೂರ್ಣಗೊಂಡಿದೆ. ಈ ಯೋಜನೆಯಡಿಯಲ್ಲಿ ಎಲ್‌ಡಬ್ಲ್ಯುಇ ಪೀಡಿತ ರಾಜ್ಯಗಳಿಗೆ ಕೇಂದ್ರವು 3,296 ಕೋಟಿಗಳನ್ನು ಮಂಜೂರು ಮಾಡಿದೆ. ಜೊತೆಗೆ ಪೊಲೀಸ್ ಠಾಣೆ ನಿರ್ಮಾಣ, ಗುಪ್ತಚರ ಜಾಲವನ್ನು ಬಲಪಡಿಸಲು ಮತ್ತು ಎಲ್‌ಡಬ್ಲ್ಯುಇ ಪೀಡಿತ ಪ್ರದೇಶಗಳಲ್ಲಿ ವಿಶೇಷ ಪಡೆಗಳಿಗೆ 992 ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿದೆ ಎಂದರು.

ಸಭೆಯಲ್ಲಿ ಭದ್ರತಾ ಕ್ರಮಗಳು, ಅಭಿವೃದ್ಧಿ ಉಪಕ್ರಮಗಳು ಮತ್ತು ಸ್ಥಳೀಯ ಸಮುದಾಯಗಳ ಹಕ್ಕುಗಳ ರಕ್ಷಣೆಯನ್ನು ಒಳಗೊಂಡ ಬಹುಮುಖಿ ಕಾರ್ಯತಂತ್ರವನ್ನು ಒಳಗೊಂಡಿರುವ 2015ರಲ್ಲಿ ಅನುಮೋದಿಸಲಾದ 'ಎಲ್‌ಡಬ್ಲುಇಯನ್ನು ನಿರ್ಮೂಲನೆ ಮಾಡಲು ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ' ಕುರಿತು ಚರ್ಚಿಸಲಾಗಿದೆ. ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, 2004 ಮತ್ತು 2014 ರ ನಡುವೆ 17,679 ಎಲ್‌ಡಬ್ಲ್ಯುಇ ಸಂಬಂಧಿತ ಘಟನೆಗಳು ಮತ್ತು 6,984 ಸಾವುಗಳು ಸಂಭವಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com