ಸಲಿಂಗ ವಿವಾಹ ತೀರ್ಪು: ಜೀವನ ಸಂಗಾತಿ ಆಯ್ಕೆ ಮಾಡುವುದು ಬದುಕಿನ ಅವಿಭಾಜ್ಯ ಅಂಗ- ಸಿಜೆಐ

ಎಲ್ ಜಿಬಿಟಿ ಸಮುದಾಯದ ವ್ಯಕ್ತಿಗಳು (ಸಲಿಂಗಕಾಮಿಗಳು, ದ್ವಿಲಿಂಗಿ, ತೃತೀಯಲಿಂಗಿಗಳು) ಸೇರಿದಂತೆ ಎಲ್ಲಾ ವ್ಯಕ್ತಿಗಳು ತಮ್ಮ ಜೀವನದ ನೈತಿಕ ಗುಣಮಟ್ಟವನ್ನು ನಿರ್ಣಯಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್, ಎಸ್‌ಆರ್ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸಲಿಂಗ ವಿವಾಹಗಳ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್, ಎಸ್‌ಆರ್ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸಲಿಂಗ ವಿವಾಹಗಳ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ

ನವದೆಹಲಿ: ಎಲ್ ಜಿಬಿಟಿ ಸಮುದಾಯದ ವ್ಯಕ್ತಿಗಳು (ಸಲಿಂಗಕಾಮಿಗಳು, ದ್ವಿಲಿಂಗಿ, ತೃತೀಯಲಿಂಗಿಗಳು) ಸೇರಿದಂತೆ ಎಲ್ಲಾ ವ್ಯಕ್ತಿಗಳು ತಮ್ಮ ಜೀವನದ ನೈತಿಕ ಗುಣಮಟ್ಟವನ್ನು ನಿರ್ಣಯಿಸುವ ಹಕ್ಕನ್ನು ಹೊಂದಿದ್ದಾರೆ. ಸ್ವಾತಂತ್ರ್ಯದ ಅರ್ಥವೆಂದರೆ ವ್ಯಕ್ತಿ ತಾನು ಬಯಸಿದ ಬದುಕನ್ನು ಬದುಕುವ ಸಾಮರ್ಥ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನದ ಹಾದಿಯನ್ನು ಆಯ್ಕೆ ಮಾಡುವ ಅವಿಭಾಜ್ಯ ಅಂಗವಾಗಿದೆ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು. ಈ ಹಕ್ಕು ಸಂವಿಧಾನ ವಿಧಿ 21 ರ ಅಡಿಯಲ್ಲಿ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಮೂಲಕ್ಕೆ ಹೋಗುತ್ತದೆ. ಒಂದು ಕೂಡಿಕೆ ಮಾಡಿಕೊಳ್ಳುವ ಹಕ್ಕನ್ನು ಸಹ ಆರ್ಟಿಕಲ್ 19(1)(ಇ) ನಲ್ಲಿ ಆಧಾರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ಎಲ್ ಜಿಬಿಟಿ ಸಮುದಾಯದ ಸಂಬಂಧಗಳಿಗೆ, ಅಂತಹ ಒಕ್ಕೂಟಗಳಿಗೆ ಮನ್ನಣೆಯ ಅಗತ್ಯವಿದೆ. ಅವರಿಗೆ ಮೂಲಭೂತ ಸೌಲಭ್ಯಗಳು, ಅಗತ್ಯ ಸೇವೆಗಳನ್ನು ನಿರಾಕರಿಸುವಂತಿಲ್ಲ. ಈ ಸಮುದಾಯದವರ ಸ್ವಾತಂತ್ರ್ಯವನ್ನು ಪರೋಕ್ಷವಾಗಿ ಕೂಡ ಉಲ್ಲಂಘಿಸಲು ಸಾಧ್ಯವಿಲ್ಲ, ಅವರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದರು.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ತೀರ್ಪನ್ನು ಪ್ರಕಟಿಸಿದೆ.

ಸಲಿಂಗ ಜೋಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿಗಳು ಇದೇ ಸಂದರ್ಭದಲ್ಲಿ ಪೊಲೀಸರಿಗೆ ಸೂಚಿಸಿದರು, ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಲಿಂಗ ಸಮುದಾಯದ ವಿರುದ್ಧ ತಾರತಮ್ಯ ಮಾಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಲಿಂಗ ಜನರ ವಿರುದ್ಧದ ತಾರತಮ್ಯವನ್ನು ಕೊನೆಗೊಳಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನೀಡಿದ ನಿರ್ದೇಶನಗಳು ಈ ರೀತಿ ಇವೆ:

  1. ವಸ್ತುಗಳು ಮತ್ತು ಸೇವೆಗಳ ಲಭ್ಯತೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು,
  2. ತೃತೀಯ ಲಿಂಗಗಳ ಸಮುದಾಯಕ್ಕೆ ನೇರ ತುರ್ತು ಸಹಾಯವಾಣಿ
  3. ಸಲಿಂಗ, ತೃತೀಯ ಲಿಂಗ ದಂಪತಿಗಳಿಗೆ ಸುರಕ್ಷಿತ ಮನೆಗಳು,
  4. ಸಲಿಂಗ ಮಕ್ಕಳಿಗೆ ಬಲವಂತವಾಗಿ ಚಿಕಿತ್ಸೆಗೆ ಒಳಪಡಿಸದೆ ಇರುವುದು
  5. ಯಾವುದೇ ವ್ಯಕ್ತಿಯನ್ನು ಯಾವುದೇ ಹಾರ್ಮೋನ್ ಚಿಕಿತ್ಸೆಗೆ ಒಳಗಾಗುವಂತೆ ಬಲವಂತ ಮಾಡಬಾರದು,
  6. ಪೊಲೀಸರು ಎಲ್ ಜಿಬಿಟಿ ಸಮುದಾಯದ ವ್ಯಕ್ತಿಗಳನ್ನು ಅವರ ಮೂಲ ಲಿಂಗಕ್ಕೆ ಮರಳುವಂತೆ ಒತ್ತಾಯಿಸಬಾರದು.

ಎಲ್ ಜಿಬಿಟಿ ಸಮುದಾಯದ ವ್ಯಕ್ತಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ನಿರ್ಧರಿಸಲು ಕೇಂದ್ರ ಸರ್ಕಾರವು ಸಮಿತಿಯನ್ನು ರಚಿಸುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು.

ಇಂದು ತೀರ್ಪು ನೀಡುವ ಸಂದರ್ಭದಲ್ಲಿ ಸಿಜೆಐ ಅವರ ಹೇಳಿಕೆಗಳ ಮುಖ್ಯಾಂಶಗಳು:

ಲಿಂಗ ಬದಲಾವಣೆ: ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಕ್ಕಳು ಅದರ ಪರಿಣಾಮಗಳನ್ನು ಸಂಪೂರ್ಣವಾಗಿ ಚೆನ್ನಾಗಿ ಅರ್ಥ ಮಾಡಿಕೊಳ್ಳುವವರೆಗೆ ಅಂತರ ಲಿಂಗ ಮಕ್ಕಳಿಗೆ ಲಿಂಗ-ಬದಲಾವಣೆ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುವಂತಿಲ್ಲ,

ತೃತೀಯ ಲಿಂಗಿಗಳ ಭಿನ್ನಲಿಂಗೀಯ ಒಕ್ಕೂಟ: ಸಿಜೆಐ ಚಂದ್ರಚೂಡ್ ಅವರು ಲಿಂಗ ಪರಿವರ್ತನೆ ಮಾಡಿಕೊಂಡವರ ನಡುವಿನ ವಿವಾಹವನ್ನು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಅವರು ಭಿನ್ನಲಿಂಗೀಯ ಸಂಬಂಧದಲ್ಲಿರುವುದರಿಂದ ನೋಂದಾಯಿಸಬಹುದು.

ವಿಶೇಷ ವಿವಾಹ ಕಾಯ್ದೆಗೆ ಬದಲಾವಣೆ ಅಗತ್ಯವಿದೆಯೇ ಎಂಬುದರ ಕುರಿತು: ವಿಶೇಷ ವಿವಾಹ ಕಾಯ್ದೆಯ(SMA) ಆಡಳಿತದಲ್ಲಿ ಬದಲಾವಣೆಯ ಅಗತ್ಯವಿದೆಯೇ ಎಂಬುದನ್ನು ಸಂಸತ್ತು ಮಾತ್ರ ನಿರ್ಧರಿಸಬಹುದು.ವಿಶೇಷ ವಿವಾಹ ಕಾಯಿದೆಯನ್ನು ರದ್ದುಗೊಳಿಸಿದರೆ, ಅದು ದೇಶವನ್ನು ಸ್ವಾತಂತ್ರ್ಯ ಪೂರ್ವ ಯುಗಕ್ಕೆ ಕೊಂಡೊಯ್ಯುತ್ತದೆ.

ಪೊಲೀಸರು ತೃತೀಯ ಲಿಂಗಿಗಳಿಗೆ ಕಿರುಕುಳ ನೀಡುವಂತಿಲ್ಲ: ತೃತೀಯ ಲಿಂಗಿಗಳ ಲೈಂಗಿಕ ಗುರುತಿನ ಬಗ್ಗೆ ವಿಚಾರಿಸಲು ಪೊಲೀಸ್ ಠಾಣೆಗೆ ಕರೆಸಿಕೊಳ್ಳುವ ಮೂಲಕ ಈ ಸಮುದಾಯದವರಿಗೆ ಯಾವುದೇ ಕಿರುಕುಳ ನೀಡಬಾರದು. ಅವರ ಇಷ್ಟದ ಲಿಂಗದ ಆಯ್ಕೆಗೆ ಸ್ವಾತಂತ್ರ್ಯ ನೀಡಬೇಕು.

ಭಿನ್ನಲಿಂಗೀಯವಲ್ಲದ ಒಕ್ಕೂಟಗಳಿಗೆ ಕಾನೂನು ಮಾನ್ಯತೆ ನೀಡುವುದು ವಿವಾಹ ಸಮಾನತೆಯತ್ತ ಒಂದು ಹೆಜ್ಜೆಯಾಗಿದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹೇಳಿದ್ದಾರೆ.

ಕಳೆದ ಮೇ 11 ರಂದು ಈ ವಿಷಯದ ವಿಚಾರಣೆಯ ಸಂದರ್ಭದಲ್ಲಿ, ಸಂಸತ್ತು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ನಿರೀಕ್ಷೆಯ ಮೇಲೆ ಸಲಿಂಗ ಒಕ್ಕೂಟಗಳ ಬಗ್ಗೆ ಘೋಷಣೆಯನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com