ಮುಂಬೈ: ನ್ಯೂಸ್ ಪೋರ್ಟಲ್ ನ್ಯೂಸ್ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯವು ಶುಕ್ರವಾರ ಐದು ದಿನಗಳ ಕಾಲ ವಿಸ್ತರಿಸಿದೆ.
ಭಯೋತ್ಪಾದನಾ ನಿಗ್ರಹ ಕಾನೂನು ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರ ಬಂಧನವಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಈ ಇಬ್ಬರೂ ಆರೋಪಿಗಳು ನ್ಯೂಸ್ ಪೋರ್ಟಲ್ಗೆ ಹಣ ಪಡೆದ ಆರೋಪ ಹೊರಿಸಲಾಗಿತ್ತು.
ಹಣ ಪಡೆದು ಇಬ್ಬರೂ ತಮ್ಮ ಪೋರ್ಟಲ್ ನಲ್ಲಿ ಚೀನಾ ಪರ ಪ್ರಚಾರ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಹೊರಿಸಲಾಗಿತ್ತು. ಅಕ್ಟೋಬರ್ 3 ರಂದು ದೆಹಲಿ ಪೊಲೀಸರ ವಿಶೇಷ ಸೆಲ್ ಪುರ್ಕಾಯಸ್ಥ ಮತ್ತು ಚಕ್ರವರ್ತಿಯನ್ನು ಬಂಧಿಸಿತ್ತು.
ಇಂದಿಗ ಅವರ ಬಂಧನ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಹರ್ದೀಪ್ ಕೌರ್ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ಈ ಆದೇಶವನ್ನು ನೀಡಿದ್ದಾರೆ.
ಆರೋಪ ಏನು?
ಎಫ್ಐಆರ್ನ ಪ್ರಕಾರ, 'ಭಾರತದ ಸಾರ್ವಭೌಮತ್ವವನ್ನು ಅಡ್ಡಿಪಡಿಸಲು' ಮತ್ತು ದೇಶದ ವಿರುದ್ಧ ಅಸಮಾಧಾನವನ್ನು ಉಂಟುಮಾಡಲು ಚೀನಾದಿಂದ ನ್ಯೂಸ್ ಪೋರ್ಟಲ್ಗೆ ಹೆಚ್ಚಿನ ಪ್ರಮಾಣದ ಹಣ ಬಂದಿದೆ. 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡಲು ಪುರ್ಕಾಯಸ್ಥ ಅವರು ಪೀಪಲ್ಸ್ ಅಲೈಯನ್ಸ್ ಫಾರ್ ಡೆಮಾಕ್ರಸಿ ಅಂಡ್ ಸೆಕ್ಯುಲರಿಸಂ (PADS) ಗುಂಪಿನೊಂದಿಗೆ ಪಿತೂರಿ ನಡೆಸಿದ್ದಾರೆ ಎಂದು ಅದು ಆರೋಪಿಸಿದೆ.
ಎಫ್ಐಆರ್ನಲ್ಲಿ ಹೆಸರಿಸಲಾದ ಶಂಕಿತರು ಮತ್ತು ದತ್ತಾಂಶಗಳ ವಿಶ್ಲೇಷಣೆಯಲ್ಲಿ ಹೊರಹೊಮ್ಮಿದ ಶಂಕಿತರ ಮೇಲೆ ಅಕ್ಟೋಬರ್ 3 ರಂದು ದೆಹಲಿಯ 88 ಮತ್ತು ಇತರ ರಾಜ್ಯಗಳ ಏಳು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ನ್ಯೂಸ್ಕ್ಲಿಕ್ನ ಕಚೇರಿಗಳು ಮತ್ತು ಪತ್ರಕರ್ತರ ನಿವಾಸಗಳಿಂದ ಸುಮಾರು 300 ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಯ ನಂತರ, ಒಂಬತ್ತು ಮಹಿಳಾ ಪತ್ರಕರ್ತರು ಸೇರಿದಂತೆ 46 ವ್ಯಕ್ತಿಗಳನ್ನು ದೆಹಲಿ ಮತ್ತು ಎನ್ಸಿಆರ್ನಲ್ಲಿನ ವಿಶೇಷ ಕೋಶವು ಪ್ರಶ್ನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement