ಲಖನೌ: ಉತ್ತರ ಪ್ರದೇಶದ ಲಖನೌನಲ್ಲಿರುವ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಪುತ್ರನ ಮನೆಯಲ್ಲಿ ಶುಕ್ರವಾರ ಮುಂಜಾನೆ 30 ವರ್ಷದ ವ್ಯಕ್ತಿಯೊಬ್ಬರು ನಿಗೂಢವಾಗಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿವರ ಪುತ್ರ ವಿಕಾಸ್ ಕಿಶೋರ್ ದೆಹಲಿಯಲ್ಲಿದ್ದ ಸಂದರ್ಭದಲ್ಲಿ ಅವರ ಸ್ನೇಹಿತ ಎಂದು ಹೇಳಲಾದ ವಿನಯ್ ಶ್ರೀವಾಸ್ತವ್ ತಲೆಗೆ ಗುಂಡೇಟು ಬಿದ್ದು ಮೃತಪಟ್ಟಿದ್ದಾರೆ. ಹತ್ಯೆಗೆ ವಿಕಾಸ್ ಕಿಶೋರ್ ಒಡೆತನದಲ್ಲಿದ್ದ ರಿವಾಲ್ವರ್ ಬಳಸಿದ್ದು, ಅದಕ್ಕೆ ಪರವಾನಗಿ ಇತ್ತೆಂದು ಆತನ ತಂದೆ ಕೌಶಲ್ ಕಿಶೋರ್ ತಿಳಿಸಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರಾಗಿರುವ ಬಿಜೆಪಿ ಸಂಸದ ಕೌಶಲ್ ಕಿಶೋರ್ ಅವರಿಗೆ ಸೇರಿರುವ ಮನೆಯಲ್ಲಿ ಹತ್ಯೆಯಾಗಿದೆ. ಆದರೆ ಮನೆ ಇನ್ನೂ ನೋಂದಣಿಯಾಗಿಲ್ಲ ಎಂದು ಸಚಿವರ ಪತ್ನಿ ಜೈ ದೇವಿ ಹೇಳಿದ್ದಾರೆ. ಮನೆಯಲ್ಲಿದ್ದ ನಾಲ್ವರು ಪುರುಷರನ್ನು ಶ್ರೀ ವಾಸ್ತವ್ ಅವರನ್ನು ಊಟಕ್ಕೆ ಕರೆದಿದ್ದು, ಅಲ್ಲಿ ಜಗಳ ನಡೆದಿದೆ ಎಂದು ಮೃತನ ಸಹೋದರಿ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ.
ವಿಕಾಶ್ ಕಿಶೋರ್ ಗುರುವಾರ ಸಂಜೆ ಲಖನೌನಿಂದ ದೆಹಲಿಗೆ ತೆರಳಿದ್ದು, ತಮ್ಮ ನಿವಾಸದಲ್ಲಿ ರಿವಾಲ್ವರ್ ಬಿಟ್ಟು ಹೋಗಿದ್ದರು, ಘಟನೆಯಲ್ಲಿ ಅದನ್ನು ಹೇಗೆ ಬಳಸಲಾಗಿದೆ ಮತ್ತು ಯಾರು ಬಳಸಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವರು ಹೇಳಿದರು. ಮೃತರ ತಲೆಗೆ ಒಂದು ಗುಂಡೇಟಿನ ಗಾಯವಿದೆ. ಘಟನೆಯಲ್ಲಿ ಬಳಸಿದ ಗನ್ ವಿಕಾಸ್ ಕಿಶೋರ್ ಹೆಸರಿನಲ್ಲಿ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಪರಿಶೀಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ರಾಹುಲ್ ರಾಜ್ ಹೇಳಿದ್ದಾರೆ.
Advertisement