ಸಂಸತ್ ವಿಶೇಷ ಅಧಿವೇಶನ ಹಿನ್ನೆಲೆ, ಭಾನುವಾರ ಸಂಜೆ ಸರ್ವಪಕ್ಷ ಸಭೆ; ಅಜೆಂಡಾ ಹೀಗಿದೆ...

ಸೋಮವಾರದಿಂದ ಐದು ದಿನಗಳ ಕಾಲ ಕೇಂದ್ರ ಸರ್ಕಾರ ಕರೆದಿರುವ ಸಂಸತ್ ವಿಶೇಷ ಅಧಿವೇಶನ ತೀವ್ರ ಕುತೂಹಲ ಕೆರಳಿಸಿರುವಂತೆಯೇ, ಎಲ್ಲಾ ಪಕ್ಷಗಳಿಂದ ಅಭಿಪ್ರಾಯ, ಸಲಹೆಗಳನ್ನು ಪಡೆಯಲು ಭಾನುವಾರ ಸಂಜೆ ಸರ್ವ ಪಕ್ಷ ನಾಯಕರೊಂದಿಗೆ ಸಭೆಯನ್ನು ಆಯೋಜಿಸಲಾಗಿದೆ.
ಪಾರ್ಲಿಮೆಂಟ್ ಚಿತ್ರ
ಪಾರ್ಲಿಮೆಂಟ್ ಚಿತ್ರ

ನವದೆಹಲಿ: ಸೋಮವಾರದಿಂದ ಐದು ದಿನಗಳ ಕಾಲ ಕೇಂದ್ರ ಸರ್ಕಾರ ಕರೆದಿರುವ ಸಂಸತ್ ವಿಶೇಷ ಅಧಿವೇಶನ ತೀವ್ರ ಕುತೂಹಲ ಕೆರಳಿಸಿರುವಂತೆಯೇ, ಎಲ್ಲಾ ಪಕ್ಷಗಳಿಂದ ಅಭಿಪ್ರಾಯ, ಸಲಹೆಗಳನ್ನು ಪಡೆಯಲು ಭಾನುವಾರ ಸಂಜೆ ಸರ್ವ ಪಕ್ಷ ನಾಯಕರೊಂದಿಗೆ ಸಭೆಯನ್ನು ಆಯೋಜಿಸಲಾಗಿದೆ.

‘ಸಂವಿಧಾನ ಸಭೆ’ಯಿಂದ ಆರಂಭಿಸಿ ಸಂಸತ್ತಿನ 75 ವರ್ಷಗಳ ಪಯಣ ಕುರಿತ ವಿಶೇಷ ಚರ್ಚೆಯೇ ಸರ್ಕಾರ ಪಟ್ಟಿ ಮಾಡಲಾದ ಪ್ರಮುಖ ಅಜೆಂಡಾವಾದರೂ ಸಾಮಾನ್ಯವಾಗಿ ಅಧಿವೇಶನ ಇಲ್ಲದೆ ಬೇರೆ ಸಂದರ್ಭದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನ ಅಚ್ಚರಿಗೆ ಕಾರಣವಾಗಿದೆ. 

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆ ಮೇಲಿನ ಚರ್ಚೆಯನ್ನು ಸರ್ಕಾರ ಕಾರ್ಯಸೂಚಿಯಲ್ಲಿ ಸೇರಿಸಿದೆ. ಕಳೆದ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಪಟ್ಟಿ ಮಾಡಲಾದ ಕಾರ್ಯಸೂಚಿಯ ಭಾಗವಾಗಿರದ ಕೆಲವು ಹೊಸ ಶಾಸನಗಳು ಅಥವಾ ಇತರ ವಿಷಯಗಳನ್ನು ಸಂಸತ್ತಿನಲ್ಲಿ ಮಂಡಿಸುವ ವಿಶೇಷ ಅಧಿಕಾರವನ್ನು ಸರ್ಕಾರ ಹೊಂದಿದೆ.

ಯಾವುದೇ ಸಂಭಾವ್ಯ ಹೊಸ ಶಾಸನದ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳದಿದ್ದರೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಂತಹ ಚುನಾಯಿತ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಕುರಿತು ಕೆಲವು ಚರ್ಚೆಗಳು ನಡೆದಿವೆ. ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಹೊಸ ಕಟ್ಟಡಕ್ಕೆ ಸಂಸತ್ತು ಸ್ಥಳಾಂತರಗೊಳ್ಳುವ ಸಾಧ್ಯತೆಯು ಹೆಚ್ಚಾಗಿದ್ದು, ಸಂಸತ್ ವಿಶೇಷ ಅಧಿವೇಶನ ಕುರಿತ ನಿರೀಕ್ಷೆಯನ್ನು ಹೆಚ್ಚಿಸಿದೆ. 

ಸಂಸತ್ತಿನ ವಿವಿಧ ಇಲಾಖೆಯ ಸಿಬ್ಬಂದಿಗೆ ಸಿಬ್ಬಂದಿಗೆ ಹೊಸ ಡ್ರೆಸ್ ಕೋಡ್ ಗೆ ಸರ್ಕಾರ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿರುವಂತೆಯೇ, ಸಂಸತ್ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯೂ ಹೆಚ್ಚಾಗಿದೆ. ಜಿ-20 ಶೃಂಗಸಭೆಯನ್ನು ಭಾರತ ಯಶಸ್ವಿಯಾಗಿ ಆಯೋಜಿಸಿದ್ದ ಬಗ್ಗೆಯೂ ಚರ್ಚೆಯೂ ನಡೆಯುವ ಸಾಧ್ಯತೆಯಿದೆ. ಆದರೆ, ಸಂಸತ್ ಸಿಬ್ಬಂದಿಯ ಹೊಸ ಡ್ರೆಸ್ ಕೋಡ್ ನಲ್ಲಿ ಕಮಲ ಚಿಹ್ನೆ ಇರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದು ಬಿಜೆಪಿಯ ತೀರಾ ಸಣ್ಣತನದ ವರ್ತನೆಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. 

ಅಧಿವೇಶನವನ್ನು ಘೋಷಿಸುವಾಗ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಇದನ್ನು 'ವಿಶೇಷ ಅಧಿವೇಶನ' ಎಂದು ಬಣ್ಣಿಸಿದ್ದರು. ಆದರೆ ಇದು ಸಾಮಾನ್ಯ ಅಧಿವೇಶನ, ಪ್ರಸ್ತುತ ಲೋಕಸಭೆಯ 13 ನೇ ಅಧಿವೇಶನ ಮತ್ತು ರಾಜ್ಯಸಭೆಯ 261 ನೇ ಅಧಿವೇಶನ ಎಂದು ಸರ್ಕಾರ ನಂತರ ಸ್ಪಷ್ಟಪಡಿಸಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ ಸಂಸತ್ತಿನ ಬಜೆಟ್, ಮಾನ್ಸೂನ್ ಮತ್ತು ಚಳಿಗಾಲದ ಅಧಿವೇಶನಗಳು ನಡೆಯುತ್ತವೆ.

ಮುಂಗಾರು ಅಧಿವೇಶನ ಜುಲೈ-ಆಗಸ್ಟ್‌ನಲ್ಲಿ ನಡೆದರೆ ನವೆಂಬರ್-ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಬಜೆಟ್ ಅಧಿವೇಶನವು ಪ್ರತಿ ವರ್ಷ ಜನವರಿ ಅಂತ್ಯದಿಂದ ಪ್ರಾರಂಭವಾಗುವ ನಿಗದಿತ ಸಮಯವನ್ನು ಹೊಂದಿರುತ್ತದೆ. ಎರಡು ಅವಧಿಗಳ ನಡುವಿನ ಅಂತರವು ಆರು ತಿಂಗಳಿಗಿಂತ ಹೆಚ್ಚಿರಬಾರದು. ಈಗಿನಂತೆ, ಅಧಿವೇಶನದ ಮೊದಲ ದಿನದಂದು ಸಂಸತ್ತಿನ ಸಭಾಂಗಣದಿಂದ ಪ್ರಾರಂಭವಾಗುವ ಸಂಸತ್ತಿನ 75 ವರ್ಷಗಳ ಪಯಣದ ವಿಶೇಷ ಚರ್ಚೆಯನ್ನು ಸರ್ಕಾರ ತನ್ನ ಕಾರ್ಯಸೂಚಿಯಲ್ಲಿ ಪಟ್ಟಿ ಮಾಡಿದೆ.

ಸೆಪ್ಟೆಂಬರ್ 18 ರಂದು ನಿಗದಿಪಡಿಸಲಾದ 'ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪಯಣ, ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು' ಎಂಬ ಚರ್ಚೆಯ ಜೊತೆಗೆ ರಾಜ್ಯಸಭೆಯಲ್ಲಿ ಈಗಾಗಲೇ ಅಂಗೀಕಾರಗೊಂಡಿರುವ 'ವಕೀಲರ (ತಿದ್ದುಪಡಿ) ಮಸೂದೆ, 2023' ಮತ್ತು ಪತ್ರಿಕಾ ಮತ್ತು ನೋಂದಣಿ ಮಸೂದೆ ಸೇರಿದಂತೆ ಮತ್ತಿತರ ಬಿಲ್  ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ.

'ಅಮೃತ್ ಕಾಲದ ಮಧ್ಯೆ ಸಂಸತ್ತಿನಲ್ಲಿ ಫಲಪ್ರದ ಚರ್ಚೆಗಳು ಮತ್ತು ಚರ್ಚೆಗಳನ್ನು ನಡೆಸಲು ಎದುರು ನೋಡುತ್ತಿದ್ದೇನೆ' ಎಂದು ಜೋಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಇವೆಲ್ಲಾವನ್ನು ನವೆಂಬರ್ ವರೆಗೂ ಕಾಯ್ದು ಚಳಿಗಾಲದ ಅಧಿವೇಶನದಲ್ಲಿ ಮಾಡಬಹುದಿತ್ತು, ವಿಶೇಷ ಅಧಿವೇಶನದ ಅಗತ್ಯವಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com