ನವದೆಹಲಿ: ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಲೋಕಸಭೆಯಲ್ಲಿ ನೀಡಿದ್ದ ಅವಹೇಳನಕಾರಿ ಹೇಳಿಕೆಯ ಗದ್ದಲದ ನಡುವೆ ಕೇಸರಿ ಪಕ್ಷ ಅವರಿಗೆ ರಾಜಸ್ಥಾನದ ಟೊಂಕ್ ಜಿಲ್ಲೆಯ ಚುನಾವಣಾ ಉಸ್ತುವಾರಿ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಅವರು, ದ್ವೇಷ ಹರಡಿದ್ದಕ್ಕೆ ಅವರಿಗೆ ಬಿಜೆಪಿ ಬಹುಮಾನ ನೀಡಿದೆ ಮತ್ತು ಈ ಕ್ರಮದಿಂದ ಆಡಳಿತ ಪಕ್ಷದ ನಿಜವಾದ ಬಣ್ಣ ಬಯಲಾಗಿದೆ ಎಂದು ಹೇಳಿದ್ದಾರೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಕೆಳಮನೆ ಮತ್ತು ಸಂವಿಧಾನದ ಸಂಪ್ರದಾಯಗಳಿಗೆ ಅನುಗುಣವಾಗಿ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಅಲಿ ತಿಳಿಸಿದ್ದಾರೆ.
"ಬಿಜೆಪಿ ಸ್ವಲ್ಪ ಸೌಜನ್ಯವನ್ನು ಕಾಯ್ದುಕೊಳ್ಳಬೇಕಿತ್ತು. ವಿಶ್ವದ ಅತಿದೊಡ್ಡ ಪಕ್ಷ ಎಂದು ಕರೆದುಕೊಳ್ಳುವ ಪಕ್ಷದಿಂದ ದೇಶದ ಜನ ನೈತಿಕತೆಯನ್ನು ನಿರೀಕ್ಷೆ ಮಾಡುತ್ತಾರೆ. ನೀವು ಅವರಿಗೆ (ಬಿಧುರಿ) ಶೋಕಾಸ್ ನೋಟಿಸ್ ನೀಡಿದ್ದೀರಿ, ಅವರ ಉತ್ತರವನ್ನು ಸಾರ್ವಜನಿಕವಾಗಿ ತಿಳಿಸಿ ಅಥವಾ ಹೇಳಿ. ನಾವು ದ್ವೇಷವನ್ನು ನ್ಯಾಯಸಮ್ಮತಗೊಳಿಸುತ್ತೇವೆ ಮತ್ತು ಅದಕ್ಕೆ ಬಹುಮಾನ ನೀಡುತ್ತೇವೆ ಎಂದು ಹೇಳಿ ಎಂದು ಅಲಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ನಿಮ್ಮ ಮುಖಂಡರು ರಸ್ತೆಯಲ್ಲಿ ಹರಡುತ್ತಿದ್ದ ದ್ವೇಷವನ್ನು ಅವರು(ಬಿಧುರಿ) ಪ್ರಜಾಪ್ರಭುತ್ವದ ದೇವಾಲಯ(ಸಂಸತ್)ದಲ್ಲಿ ಹರಡಿದ್ದಾರೆ. ನೀವು ದ್ವೇಷದ ಹರಡುವಿಕೆಯನ್ನು ಪುರಸ್ಕರಿಸುತ್ತಿದ್ದೀರಿ. ಇದು ನಿಮ್ಮ ನಿಜವಾದ ಉದ್ದೇಶ ಮತ್ತು ಮುಖ ಎಂಬುದು ಬಯಲಾಗಿದೆ ಎಂದಿದ್ದಾರೆ.
Advertisement