ಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇ ಅಕ್ಟೋಬರ್ ಗೆ ರೆಡಿ; ಫೈಬರ್ ಶೀಟ್ ಬಳಕೆ!

ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇ ಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಆಗಿದ್ದು ಇದೇ ಅಕ್ಟೋಬರ್ ವೇಳೆಗೆ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಗುರಿಯನ್ನು ನಿಗದಿಪಡಿಸಲಾಗಿದೆ.
ಎಕ್ಸ್ ಪ್ರೆಸ್ ವೇ ನಿರ್ಮಾಣ ಕಾಮಗಾರಿ
ಎಕ್ಸ್ ಪ್ರೆಸ್ ವೇ ನಿರ್ಮಾಣ ಕಾಮಗಾರಿ

ಡೆಹ್ರಾಡೂನ್: ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇ ಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಆಗಿದ್ದು ಇದೇ ಅಕ್ಟೋಬರ್ ವೇಳೆಗೆ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಗುರಿಯನ್ನು ನಿಗದಿಪಡಿಸಲಾಗಿದೆ. 

ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ನಂತರ ದೆಹಲಿಯಿಂದ ಡೆಹ್ರಾಡೂನ್ ಗೆ ಪ್ರಯಾಣ ಸಮಯ 6 ಗಂಟೆಯಿಂದ ಕೇವಲ ಎರಡೂವರೆ ಗಂಟೆಗೆ ಇಳಿಯಲಿದೆ. ಡೆಹ್ರಾಡೂನ್‌ನಿಂದ ಉತ್ತರ ಪ್ರದೇಶದ ಗಣೇಶಪುರದವರೆಗಿನ ಸಂಪೂರ್ಣ ಪ್ರದೇಶವು ರಾಜಾಜಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಅಡಿಯಲ್ಲಿ ಬರುತ್ತದೆ. ಇದು ಸುಮಾರು 20 ಕಿಲೋಮೀಟರ್ ಪ್ರದೇಶವಾಗಿದೆ. ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಯ ದಟ್ಟ ಅರಣ್ಯದ ಭಾಗದಲ್ಲಿ ವನ್ಯಜೀವಿಗಳ ಓಡಾಟ ಇರಲಿದೆ. ಈ ಕಾರಣದಿಂದಲೇ 12 ಕಿ.ಮೀ ದೂರದವರೆಗೆ ಪಿಲ್ಲರ್‌ಗಳನ್ನು ನಿರ್ಮಿಸಲಾಗಿದ್ದು ಇದರಿಂದಾಗಿ ವನ್ಯಜೀವಿಗಳು ಪಿಲ್ಲರ್ ನ ಕೆಳಗೆ ಸಲಿಸಾಗಿ ಚಲಿಸಬಹುದಾಗಿದೆ. ಇನ್ನು ಏಳು ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಮೈದಾನದಲ್ಲಿ ಸಂಚಾರ ಸಾಗಲಿದೆ. 

ಡೆಹ್ರಾಡೂನ್ ನ ಆಶಾರೋಡಿಯಿಂದ ದಾತ್ ಕಾಳಿ ದೇವಸ್ಥಾನದವರೆಗೆ ತಲಾ 200 ಮೀಟರ್‌ಗಳ ಎರಡು ಆನೆ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರ ಎತ್ತರ ಏಳು ಮೀಟರ್ ಆಗಿರಲಿದ್ದು ಈ ಮೂಲಕ ಆನೆಗಳು ಕೂಡ ಈ ರಸ್ತೆಯಿಂದ ಇನ್ನೊಂದು ಬದಿಗೆ ಬರಲು ಸಾಧ್ಯವಾಗುತ್ತದೆ. ಆನೆ ಕಾರಿಡಾರ್‌ನ ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇದಲ್ಲದೆ, ಆಶಾರೋಡಿಯಿಂದ ದಾಟ್ ಕಾಳಿ ಮಂದಿರದವರೆಗೆ ಆರು ಸಣ್ಣ ಪ್ರಾಣಿಗಳ ಅಂಡರ್‌ಪಾಸ್‌ಗಳನ್ನು ಸಹ ನಿರ್ಮಿಸಲಾಗುತ್ತಿದೆ. 

ಹುಲಿಗಳು, ಗುಲ್ದಾರ್‌ಗಳು, ಚಿತಾಲ್‌ಗಳು ಮತ್ತು ಇತರ ಸಣ್ಣ ವನ್ಯಜೀವಿಗಳು ಇವುಗಳ ಮೂಲಕ ಸುಲಭವಾಗಿ ಹಾದುಹೋಗಬಹುದು. ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ, ಹಾವು, ಚೇಳು ಮತ್ತು ನೆಲದ ಮೇಲೆ ಹರಿದಾಡುವ ಇತರ ಸೂಕ್ಷ್ಮಾಣು ಜೀವಿಗಳಿಗಾಗಿ ವಿಶೇಷವಾಗಿ 12 ಸಣ್ಣ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದು ಮಳೆಗಾಲದಲ್ಲಿ ನೀರಿನ ಒಳಚರಂಡಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಡೆಹ್ರಾಡೂನ್‌ನ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಮೂರು ವರ್ಷಗಳ ಅಧ್ಯಯನದ ನಂತರ ಆಶಾರೋಡಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಎರಡು ಆನೆ ಕಾರಿಡಾರ್‌ಗಳಿಗೆ ಸ್ಥಳವನ್ನು ಆಯ್ಕೆ ಮಾಡಲಾಗಿದೆ. 

ಈ ಸಂದರ್ಭದಲ್ಲಿ ಸಂಸ್ಥೆಯು ಸುಮಾರು ಮೂರೂವರೆ ಕಿಮೀ ಪ್ರದೇಶದಲ್ಲಿ ಹಲವೆಡೆ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದೆ. ಅದರ ಆಧಾರದ ಮೇಲೆ ಈ ಕಾರಿಡಾರ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.

ಎನ್‌ಎಚ್‌ಎಐ-ಡೆಹ್ರಾಡೂನ್‌ನ ಯೋಜನಾ ನಿರ್ದೇಶಕ ಪಿ ಕೆ ಮೌರ್ಯ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದು ವಾಹನಗಳ ಹೆಡ್‌ಲೈಟ್‌ಗಳು, ಹಾರ್ನ್ ಮತ್ತು ವಾಹನಗಳ ಶಬ್ದಗಳು ವನ್ಯಜೀವಿಗಳಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಹೀಗಾಗಿ ಇದನ್ನು ಎನ್‌ಎಚ್‌ಎಐ ಶಬ್ದ ತಡೆ ರೂಪದಲ್ಲಿ ಪರಿಹರಿಸಿದ್ದು ಇದಕ್ಕಾಗಿ ಫೈಬರ್ ಶೀಟ್ ಗಳನ್ನು ಬಳಸಲಾಗುತ್ತಿದೆ. ಇದು ಪಾಲಿಕಾರ್ಬೊನೇಟ್ ವಸ್ತುಗಳಿಂದ ಮಾಡಲ್ಪಟ್ಟಿದ್ದು ಹೆದ್ದಾರಿಯ ಎರಡೂ ಬದಿಯಲ್ಲಿ ನಾಲ್ಕು ಮೀಟರ್ ಎತ್ತರದವರೆಗೆ ಇದನ್ನು ಅಳವಡಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com