'ನನ್ನದು ಜೀವವಲ್ಲವೇ? ಮೂಷಿಕನ ಮೂಕ ರೋಧನ': ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ನೀರಿನಲ್ಲಿ ಮುಳುಗಿಸಿ ಕೊಂದಿದ್ದವನ ವಿರುದ್ಧ ಚಾರ್ಜ್ ಶೀಟ್!

ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ನೀರಿನಲ್ಲಿ ಮುಳುಗಿಸಿ ಕೊಂದ ಆರೋಪದ ಮೇಲೆ ಉತ್ತರ ಪ್ರದೇಶದ ಬದೌನ್ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ದ 30 ಪುಟಗಳ  ಚಾರ್ಜ್‌ ಶೀಟ್ ದಾಖಲಿಸಿದ್ಧಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬದೌನ್: ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ನೀರಿನಲ್ಲಿ ಮುಳುಗಿಸಿ ಕೊಂದ ಆರೋಪದ ಮೇಲೆ ಉತ್ತರ ಪ್ರದೇಶದ ಬದೌನ್ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ದ 30 ಪುಟಗಳ  ಚಾರ್ಜ್‌ ಶೀಟ್ ದಾಖಲಿಸಿದ್ಧಾರೆ.

2022ರ ನವೆಂಬರ್‌ನಲ್ಲಿ ಆರೋಪಿ ಈ ಕೃತ್ಯ ಎಸಗಿದ್ದ ಎಂದು ಚಾರ್ಜ್ ಶೀಟ್‌ನಲ್ಲಿ ನಮೂದಿಸಲಾಗಿದೆ.  ಚಾರ್ಜ್‌ಶೀಟ್ ಬಲಗೊಳಿಸಲು ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧಾರವಾಗಿ ಬಳಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ಮನೋಜ್ ಕುಮಾರ್, ಪುಟ್ಟದೊಂದು ಮನೆಯಲ್ಲಿ ತನ್ನ ಮೂವರು ಹೆಣ್ಣು ಮಕ್ಕಳ ಜೊತೆ ವಾಸವಾಗಿದ್ದಾನೆ. ಕಳೆದ ವರ್ಷ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 429ರ ಅಡಿ ಪ್ರಕರಣ ದಾಖಲಾಗಿತ್ತು. ಕಿಡಿಗೇಡಿತನದಿಂದ ಪ್ರಾಣಿಯನ್ನು ಕೊಂದ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11 (1) ರ ಅಡಿಯಲ್ಲೂ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮಣ್ಣನ್ನು ಬಳಸಿ ತಯಾರಿಸಿದ ಪಾತ್ರೆಗಳನ್ನು ಇಲಿಗಳು ಹಾಳು ಮಾಡಿದ್ದವು. ಇದರಿಂದ ಮಾನಸಿಕ ಹಾಗೂ ಆರ್ಥಿಕ ಸಮಸ್ಯೆ ಉಂಟಾಗಿದೆ. ನನ್ನ ಮಗನ ವಿರುದ್ಧ ಕ್ರಮ ಕೈಗೊಂಡರೆ ಆಡು,ಕೋಳಿ, ಕೋಳಿಗಳನ್ನು ಕಡಿಯುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಮೀನುಗಳು, ಇಲಿಗಳನ್ನು ಕೊಲ್ಲುವ ರಾಸಾಯನಿಕವನ್ನು ಮಾರಾಟ ಮಾಡುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು, ಇಲಿ ಮತ್ತು ಕಾಗೆಗಳನ್ನು ಕೊಲ್ಲುವುದು ತಪ್ಪಲ್ಲ, ಇವು ಹಾನಿಕಾರಕ ಜೀವಿಗಳು ಎಂದು ಮನೋಜ್ ಕುಮಾರ್ ತಂದೆ ಮಥುರಾ ಪ್ರಸಾದ್ ಹೇಳಿದ್ದಾರೆ.

ಈತ ಇಟ್ಟಿಗೆಯೊಂದಕ್ಕೆ ಇಲಿಯನ್ನು ಕಟ್ಟಿ ನೀರಿನಲ್ಲಿ ಮುಳುಗಿಸಿ ಕೊಲ್ಲುವ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಸತ್ತ ಇಲಿಯನ್ನು ಇಟ್ಟಿಗೆಯಲ್ಲಿ ಕಟ್ಟಿದ್ದ ದಾರದ ಸಮೇತ ಆರೋಪಿ ವಿಡಿಯೋದಲ್ಲಿ ತೋರಿಸಿದ್ದ. ಸಾಮಾಜಿಕ ಜಾಲತಾಣದ ವಿಡಿಯೋ ಆಧರಿಸಿ ಆರೋಪಿ ವಿರುದ್ಧ ಸ್ಥಳೀಯ ಪ್ರಾಣಿ ಹಕ್ಕು ಕಾರ್ಯಕರ್ತರು ನವೆಂಬರ್ 2022ರಲ್ಲಿ ದೂರು ದಾಖಲಿಸಿದ್ದರು.

ನವೆಂಬರ್‌ನಲ್ಲಿ ನಡೆದ ಘಟನೆಯ ನಂತರ, ಇಲಿಯ ಮೃತದೇಹವನ್ನು ಶವಪರೀಕ್ಷೆಗಾಗಿ ಬುಡಾನ್‌ನಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಯಿತು ಆದರೆ ಸಿಬ್ಬಂದಿ ಅದನ್ನು ಪರೀಕ್ಷಿಸಲು ನಿರಾಕರಿಸಿದರು. ನಂತರ ಮೃತದೇಹವನ್ನು ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ (IVRI) ಕಳುಹಿಸಲಾಯಿತು. ನಂತರ ಫೋರೆನ್ಸಿಕ್ ಪರೀಕ್ಷೆಯಲ್ಲಿ ಇಲಿಯ ಶ್ವಾಸಕೋಶ ಊದಿಕೊಂಡಿದ್ದು ಶ್ವಾಸಕೋಶದ ಸೋಂಕಿನಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಆರೋಪಿ ವಿರುದ್ದ ದೂರು ನೀಡಿದ್ದ ಪ್ರಾಣಿ ಹಕ್ಕು ಕಾರ್ಯಕರ್ತ ವಿಕೇಂದ್ರ ಶರ್ಮಾ, ಇಲಿಗಳು ಮನುಷ್ಯರಿಗೆ ಹಲವು ವಿಧದಲ್ಲಿ ಕಿರಿಕಿರಿ ಉಂಟು ಮಾಡುತ್ತವೆ. ಆದರೆ, ಅದನ್ನು ಕೊಂದ ರೀತಿ ಮಾತ್ರ ತುಂಬಾನೇ ಕ್ರೂರವಾದದ್ದು. ಹೀಗಾಗಿ ಈ ಕೃತ್ಯ ಪ್ರಾಣಿಗಳ ವಿರುದ್ದ ಕ್ರೌರ್ಯದ ಅಡಿ ಬರುತ್ತದೆ ಎಂದು ಹೇಳಿದ್ದಾರೆ. ಈ ರೀತಿಯ ಪ್ರಕರಣ ದಾಖಲು ಮಾಡುವ ಮೂಲಕ ಪ್ರಾಣಿಗಳ ವಿರುದ್ಧ ಕ್ರೌರ್ಯ ಎಸಗುವವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಶರ್ಮಾ ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com