ಅಸ್ಸಾಂ-ಅರುಣಾಚಲ ನಡುವಿನ 50 ವರ್ಷಗಳ ಗಡಿ ವಿವಾದ ಅಂತ್ಯ: ಅಮಿತ್ ಶಾ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ!

ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವೆ ಹಲವು ವರ್ಷಗಳಿಂದ ನಡೆಯುತ್ತಿರುವ ಗಡಿ ವಿವಾದ ಇದೀಗ ಬಗೆಹರಿದಿದೆ.
ಹಿಮಂತ್ ಬಿಸ್ವಾ ಶರ್ಮಾ-ಅಮಿತ್ ಶಾ-ಪೇಮಾ ಖಂಡು
ಹಿಮಂತ್ ಬಿಸ್ವಾ ಶರ್ಮಾ-ಅಮಿತ್ ಶಾ-ಪೇಮಾ ಖಂಡು

ನವದೆಹಲಿ: ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವೆ ಹಲವು ವರ್ಷಗಳಿಂದ ನಡೆಯುತ್ತಿರುವ ಗಡಿ ವಿವಾದ ಇದೀಗ ಬಗೆಹರಿದಿದೆ.

ವಾಸ್ತವವಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಅರುಣಾಚಲ ಸಿಎಂ ಪೇಮಾ ಖಂಡು ಇಂದು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರು. ಈ ಹಿಂದೆ 2022ರ ಮಾರ್ಚ್ ನಲ್ಲಿ ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳು ತಮ್ಮ 50 ವರ್ಷಗಳ ಬಾಕಿ ಉಳಿದಿರುವ ಗಡಿ ವಿವಾದವನ್ನು ಪರಿಹರಿಸಲು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದವು.

ಇಂದು ಸಂಜೆ 5 ಗಂಟೆಗೆ ನಾರ್ತ್ ಬ್ಲಾಕ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಎರಡೂ ರಾಜ್ಯಗಳ ಪ್ರತಿನಿಧಿಗಳು ತಿಳುವಳಿಕೆ ಪತ್ರಕ್ಕೆ(ಎಂಒಯು) ಸಹಿ ಹಾಕಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. 

ಅರುಣಾಚಲ ಪ್ರದೇಶದೊಂದಿಗೆ ದಶಕಗಳಿಂದ ನಡೆಯುತ್ತಿರುವ ಗಡಿ ವಿವಾದ ಸಮಸ್ಯೆಯನ್ನು ಬಗೆಹರಿಸಲು ಅಸ್ಸಾಂ ಸಚಿವ ಸಂಪುಟವು ಏಪ್ರಿಲ್ 19ರಂದು ನಿರ್ಧಾರ ಕೈಗೊಂಡಿತ್ತು. ರಾಜ್ಯ ಸರ್ಕಾರವು ರಚಿಸಿದ್ದ 12 ಪ್ರಾದೇಶಿಕ ಸಮಿತಿಗಳು ನೀಡಿದ ಶಿಫಾರಸುಗಳನ್ನು ರಾಜ್ಯ ಸರ್ಕಾರ ನಿನ್ನೆ ಅಂದರೆ ಏಪ್ರಿಲ್ 19 ರಂದು ಅಂಗೀಕರಿಸಿತ್ತು. ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಗುವಾಹಟಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಏತನ್ಮಧ್ಯೆ, ರಾಜ್ಯದ 8 ಮೆಗಾ ಯೋಜನೆಗಳಿಗೆ 8201.29 ಕೋಟಿ ರೂಪಾಯಿ ಹೂಡಿಕೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮೇ 9ರಂದು ಎಂಒಯುಗಳಿಗೆ ಸಹಿ ಹಾಕಲಾಗುತ್ತದೆ. ಈ ಯೋಜನೆಗಳ ಅಡಿಯಲ್ಲಿ ಸುಮಾರು 6,100 ಜನರು ನೇರ ಉದ್ಯೋಗದ ಪ್ರಯೋಜನವನ್ನು ಪಡೆಯುತ್ತಾರೆ. ಇದೇ ವೇಳೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆ ಚಳವಳಿಯಲ್ಲಿ ಪಾಲ್ಗೊಂಡಿದ್ದ ಪ್ರಜಾಪ್ರಭುತ್ವ ಹೋರಾಟಗಾರರಿಗೆ ಮಾಸಿಕ 15 ಸಾವಿರ ಪಿಂಚಣಿ ನೀಡಲು ಅನುಮೋದನೆ ನೀಡಲಾಗಿದೆ. ಮತ್ತೊಂದೆಡೆ, ಆಯಿಲ್ ಇಂಡಿಯಾ ಲಿಮಿಟೆಡ್ ಮತ್ತು ಅಸ್ಸಾಂ ಗ್ಯಾಸ್ ಕಂಪನಿ (ಶೇ. 51 ಪಾಲು) ನಡುವೆ ಸಿಟಿ ಗ್ಯಾಸ್ ಸೇವೆಗಾಗಿ ಜಂಟಿ ಉದ್ಯಮಕ್ಕೆ ರಾಜ್ಯ ಕ್ಯಾಬಿನೆಟ್ ಅನುಮೋದನೆ ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com