ಭೂಮಿಯ ಕಕ್ಷೆ ತೊರೆದು ಚಂದ್ರನತ್ತ ಚಂದ್ರಯಾನ-3 ಪ್ರಯಾಣ
ಶ್ರೀಹರಿಕೋಟಾ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆಯು ಭೂಮಿಯ ಕಕ್ಷೆ ತೊರೆದು ಚಂದ್ರನತ್ತ ಪಯಣ ಆರಂಭಿಸಿದೆ.
ಈ ಬಗ್ಗೆ ಸ್ವತಃ ಇಸ್ರೋ ಮಾಹಿತಿ ನೀಡಿದ್ದು, ಚಂದ್ರಯಾನ–3 'ಬಾಹ್ಯಾಕಾಶ ನೌಕೆ'ಯನ್ನು ಟ್ರಾನ್ಸ್ಲೂನಾರ್ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. 'ಚಂದ್ರಯಾನ–3 ಬಾಹ್ಯಾಕಾಶ ನೌಕೆ ಭೂಮಿಯ ಸುತ್ತಲಿನ ಕಕ್ಷೆಯನ್ನು ಪೂರ್ಣಗೊಳಿಸಿದ್ದು, ಚಂದ್ರನ ಕಕ್ಷೆಯತ್ತ ಸಾಗಿದೆ. ಇದೀಗ 'ಲೂನಾರ್ ಟ್ರಾನ್ಸ್ಫರ್ ಟ್ರಾಜೆಕ್ಟರಿ' ಪಥದಲ್ಲಿ ನೌಕೆ ಸಾಗುತ್ತಿದೆ' ಎಂದು ಇಸ್ರೊ ತಿಳಿಸಿದೆ.
'ಸೋಮವಾರ ಮಧ್ಯರಾತ್ರಿ ಭೂಮಿಯ ಕಕ್ಷೆಯಿಂದ ಬೇರ್ಪಟ್ಟ ನೌಕೆ ಚಂದ್ರನೆಡೆಗೆ ಸಾಗಿದ್ದು, ನೌಕೆ ಚಂದ್ರನತ್ತ ಆಗಮಿಸುತ್ತಿದ್ದಂತೆ 'ಲೂನಾರ್–ಆರ್ಬಿಟ್ ಇನ್ರ್ಸಶನ್' (ಎಲ್ಓಐ) ಕಾರ್ಯ ಪ್ರಾರಂಭವಾಗುತ್ತದೆ. ಆಗಸ್ಟ್ 5ಕ್ಕೆ ಎಲ್ಓಐ ಮಾಡಲು ಯೋಜಿಸಲಾಗಿದೆ. ಆಗಸ್ಟ್ 17ರಂದು ಪ್ಯೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 23ರ ಸಂಜೆ 5.47ಕ್ಕೆ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡ್ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಸೋಮವಾರ ನಸುಕಿನ 12 ಗಂಟೆಯಿಂದ 12.30ರ ನಡುವೆ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಚಂದ್ರಯಾನ-3 ಮಿಷಿನ್ ವೇಳಾಪಟ್ಟಿಗೆ ಅನುಗುಣವಾಗಿ ನಡೆದಿದ್ದು, ಬಾಹ್ಯಾಕಾಶ ನೌಕೆಯ ಸ್ಥಿತಿ ಸಹಜವಾಗಿದೆ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ.
ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು 14 ದಿನಗಳ ಕಾಲ ಅಲ್ಲಿ ಪ್ರಯೋಗಗಳನ್ನು ನಡೆಸುತ್ತದೆ. ಈ ಕಾರ್ಯಾಚರಣೆಯ ಮೂಲಕ, ಇಸ್ರೋ ಚಂದ್ರನ ಮೇಲ್ಮೈಯಲ್ಲಿ ಭೂಕಂಪಗಳು ಹೇಗೆ ಸಂಭವಿಸುತ್ತವೆ ಮತ್ತು ಚಂದ್ರನ ಮಣ್ಣನ್ನು ಅಧ್ಯಯನ ಮಾಡುತ್ತದೆ ಎಂಬುದನ್ನು ಕಂಡುಹಿಡಿಯುತ್ತದೆ. ಇಸ್ರೋ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಮೃದುವಾಗಿ ಇಳಿಸಲು ಪ್ರಯತ್ನಿಸುತ್ತದೆ.
ಜುಲೈ 14ರಂದು ಇಸ್ರೊ ಚಂದ್ರಯಾನ–3 ಯೋಜನೆಯ ಭಾಗವಾಗಿ ಬಾಹ್ಯಾಕಾಶ ನೌಕೆಯನ್ನು ಉಡ್ಡಯನ ಮಾಡಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ