ಆಗಸ್ಟ್ 8 ರಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ; ಪ್ರಧಾನಿ ಮೋದಿಯಿಂದ ಉತ್ತರ!
ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಈಗಾಗಲೇ ಅವಿಶ್ವಾಸ ನಿರ್ಣಯ ಮಂಡಿಸಿವೆ. ಲೋಕಸಭೆಯಲ್ಲಿ ಆಗಸ್ಟ್ 8 ಮತ್ತು 10ರ ನಡುವೆ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡುವ ಸಾಧ್ಯತೆ ಇದೆ.
Published: 01st August 2023 01:50 PM | Last Updated: 01st August 2023 02:03 PM | A+A A-

Lok Sabha (Photo | PTI)
ನವದೆಹಲಿ: ಮಣಿಪುರದ ಹಿಂಸಾಚಾರದ ಕುರಿತು ಪ್ರಧಾನಿ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ವಿಪಕ್ಷಗಳು ಪಟ್ಟು ಹಿಡಿದಿದ್ದು, ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಈಗಾಗಲೇ ಅವಿಶ್ವಾಸ ನಿರ್ಣಯ ಮಂಡಿಸಿವೆ. ಲೋಕಸಭೆಯಲ್ಲಿ ಆಗಸ್ಟ್ 8 ಮತ್ತು 10ರ ನಡುವೆ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡುವ ಸಾಧ್ಯತೆ ಇದೆ.
ಲೋಕಸಭೆಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಭೆಯನ್ನು ವಿರೋಧ ಪಕ್ಷಗಳ ಒಕ್ಕೂಟವಾದ INDIA ಮತ್ತು ಭಾರತ್ ರಾಷ್ಟ್ರ ಸಮಿತಿಯು ಬಹಿಷ್ಕರಿಸಿದೆ. ಸದನವು ತಕ್ಷಣವೇ ಈ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದ ವಿಪಕ್ಷಗಳು, ಸರ್ಕಾರವು ತನ್ನ ಶಾಸಕಾಂಗ ಕಾರ್ಯಸೂಚಿಯನ್ನು ತಳ್ಳಿಹಾಕುವುದರ ವಿರುದ್ಧ ಪ್ರತಿಭಟಿಸಿವೆ.
ಸದನವು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಯಾವುದೇ ನಿಯಮಗಳು ಇಲ್ಲ. ಅವಿಶ್ವಾಶ ನಿರ್ಣಯ ಅಂಗೀಕಾರಗೊಂಡ 10 ದಿನಗಳೊಳಗೆ ಪ್ರಸ್ತಾವನೆಯನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ನಿಯಮಗಳು ಹೇಳುತ್ತವೆ ಎಂದು ಕೇಂದ್ರ ಹೇಳಿದೆ.
#MonsoonSession2023 | The discussion on no-confidence motion likely to be held on 8th and 9th August and reply on 10th August.
— ANI (@ANI) August 1, 2023
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಮೈತ್ರಿಕೂಟವಾದ INDIA ಲೋಕಸಭೆಯಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಲು ಸ್ಪೀಕರ್ ಓಂ ಬಿರ್ಲಾ ಅವರು ಜುಲೈ 26ರಂದು ಅಂಗೀಕರಿಸಿದ್ದಾರೆ.
ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ ಕೃತ್ಯದ ವಿಡಿಯೋ ವೈರಲ್ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ಹೊರಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ, ಕಳೆದ ಎರಡು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದರೂ ಅವರು ಇದುವರೆಗೆ ಸದನದೊಳಗೆ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ಪೊಲೀಸರು ಏನು ಮಾಡುತ್ತಿದ್ದರು?: ಮಣಿಪುರ ವೈರಲ್ ವಿಡಿಯೋ ಕುರಿತು ಕೇಂದ್ರ, ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಈ ವಿಚಾರವಾಗಿ, ಸದನದೊಳಗೆ ಪ್ರಧಾನಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿರುವ ಪ್ರತಿಪಕ್ಷಗಳು, ಅವಿಶ್ವಾಸ ನಿರ್ಣಯ ಮಂಡಿಸುವ ಅಸ್ತ್ರ ಪ್ರಯೋಗಿಸಿವೆ. ನಿಯಮದ ಪ್ರಕಾರ ಸ್ಪೀಕರ್ ಸದನದ ಎಲ್ಲಾ ನಾಯಕರ ಜೊತೆಗೆ ಸಮಾಲೋಚಿಸಿ, 10 ದಿನಗಳೊಳಗೆ ಈ ಕುರಿತ ಚರ್ಚೆಗೆ ದಿನಾಂಕ ನಿಗದಿಪಡಿಸುತ್ತಾರೆ.
ಅವಿಶ್ವಾಸ ನಿರ್ಣಯ ಎಂದರೇನು?
ಕೇಂದ್ರ ಸರ್ಕಾರಕ್ಕೆ ಬಹುಮತವನ್ನು ಮತ್ತು ಆಡಳಿತ ನಡೆಸುವ ಸಾಮರ್ಥ್ಯವನ್ನು ಪ್ರಶ್ನಿಸಲು ವಿಪಕ್ಷಗಳಿಗೆ ಅವಕಾಶವನ್ನು ಕಲ್ಪಿಸುವ ಸಂಸದೀಯ ಪ್ರಕ್ರಿಯೆಯನ್ನು ಅವಿಶ್ವಾಸ ಗೊತ್ತುವಳಿ ಎಂದು ಕರೆಯುತ್ತಾರೆ. ಈ ನಿರ್ಣಯವನ್ನು ಸದನ ಬಹುಮತದಿಂದ ಅಂಗೀಕರಿಸಿದರೆ, ಸರ್ಕಾರ ರಾಜೀನಾಮೆ ನೀಡಬೇಕಾಗುತ್ತದೆ.