ರಾಹುಲ್ ಗಾಂಧಿ ಅನರ್ಹತೆ ರದ್ದು: ಸಂಸತ್ನಲ್ಲಿ ಮತ್ತೆ ಪ್ರತಿಧ್ವನಿಸಲಿದೆ ಜನಪರ ಧ್ವನಿ ಎಂದ ಪ್ರಿಯಾಂಕಾ ವಾದ್ರಾ
ನವದೆಹಲಿ: ಅನರ್ಹಗೊಂಡಿದ್ದ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯಾಗಿರುವುದು ಕೇಂದ್ರ ಸರ್ಕಾರದ ವಿರುದ್ಧದ ಕಾಂಗ್ರೆಸ್ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ ಎಂದು ರಾಹುಲ್ ಗಾಂಧಿ ಅವರ ಸಹೋದರಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು ಸಂಸತ್ ಪ್ರವೇಶಿಸಿರುವ ವಿಡಿಯೊವನ್ನು ಪ್ರಿಯಾಂಕಾ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಜನಪರವಾದ ಧ್ವನಿ ಮತ್ತೆ ಸಂಸತ್ನಲ್ಲಿ ಪ್ರತಿಧ್ವನಿಸಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
‘ಜನರ ಸಮಸ್ಯೆಗಳನ್ನು ಪ್ರತಿನಿಧಿಸುವ ಧ್ವನಿ ಸಂಸತ್ನಲ್ಲಿ ಮತ್ತೆ ಪ್ರತಿಧ್ವನಿಸಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಹೋರಾಟ ಮಾಡಿದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳು. ಸತ್ಯ ಮತ್ತು ನ್ಯಾಯದ ಪರ ನಿಂತ ಜನತೆಗೂ ಧನ್ಯವಾದಗಳು’ ಎಂದು ತಿಳಿಸಿದ್ದಾರೆ. ಅಲ್ಲದೆ ಗೌತಮ ಬುದ್ಧರ ಮಾತನ್ನು ಉಲ್ಲೇಖಿಸಿ "ಮೂರು ವಿಷಯಗಳನ್ನು ದೀರ್ಘಕಾಲ ಮರೆಮಾಡಲು ಸಾಧ್ಯವಿಲ್ಲ: ಸೂರ್ಯ, ಚಂದ್ರ ಮತ್ತು ಸತ್ಯ" ಎಂದು ಟ್ವೀಟ್ ಮಾಡಿದ್ದಾರೆ.
ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ವಿಧಿಸಿದ 2 ವರ್ಷದ ಶಿಕ್ಷಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬೆನ್ನಲ್ಲೇ ಲೋಕಸಭಾ ಸಚಿವಾಲಯ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸಿದೆ. ಸದಸ್ಯತ್ವ ಮರುಸ್ಥಾಪನೆಗೊಂಡ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸತ್ ಪ್ರವೇಶಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ