ಪ್ರಧಾನಿ ಮೋದಿ 'ಮೌನ ವ್ರತ' ಮುರಿಯಲು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಾಯಿತು: ಗೌರವ್ ಗೊಗೊಯ್

ಮಣಿಪುರ ಹಿಂಸಾಚಾರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ತಾಳಿಸಿದ್ದು, ಈ ಮೌನ ವ್ರ ಮುರಿಯುವ ಸಲುವಾಗಿಯೇ ಪ್ರತಿಪಕ್ಷಗಳ INDIA ಒಕ್ಕೂಟ ಅವಿಶ್ವಾಸ ನಿರ್ಣಯ ಮಂಡಿಸಬೇಕಾಯಿತು ಎಂದು ಪ್ರತಿಪಕ್ಷದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಮಂಗಳವಾರ ಹೇಳಿದರು.
ಸಂಸತ್ತಿನಲ್ಲಿ ಮಾತನಾಡುತ್ತಿರುವ ಗೌರವ್ ಗೊಗೋಯ್.
ಸಂಸತ್ತಿನಲ್ಲಿ ಮಾತನಾಡುತ್ತಿರುವ ಗೌರವ್ ಗೊಗೋಯ್.
Updated on

ನವದೆಹಲಿ: ಮಣಿಪುರ ಹಿಂಸಾಚಾರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ತಾಳಿಸಿದ್ದು, ಈ ಮೌನ ವ್ರ ಮುರಿಯುವ ಸಲುವಾಗಿಯೇ ಪ್ರತಿಪಕ್ಷಗಳ INDIA ಒಕ್ಕೂಟ ಅವಿಶ್ವಾಸ ನಿರ್ಣಯ ಮಂಡಿಸಬೇಕಾಯಿತು ಎಂದು ಪ್ರತಿಪಕ್ಷದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಮಂಗಳವಾರ ಹೇಳಿದರು.

ವಿಪಕ್ಷಗಳ ಮಹಾಮೈತ್ರಿಕೂಟದ ಪರವಾಗಿ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯವನ್ನು ಅಧಿಕೃತವಾಗಿ ಮಂಡಿಸಿದ ಚರ್ಚೆ ಆರಂಭಿಸಿದ ಗೊಗೊಯ್ ಅವರು, ಅಸಹಾಯಕತೆಯಿಂದಾಗಿ ನಾವು ಅವಿಶ್ವಾಸ ನಿರ್ಣಯ ಮಂಡಿಸಬೇಕಾಯಿತು. ಸರ್ಕಾರದ ಬೆಂಬಲಕ್ಕಿರುವ ಸಂಖ್ಯೆಗಳು ನಮಗೆ ಗೊತ್ತಿಲ್ಲ. ಆದರೆ, ನಮಗೆ ಬೇಕಿರುವುದು ನ್ಯಾಯ. ಮಣಿಪುರಕ್ಕೆ ನ್ಯಾಯ ಸಿಗುವುದಷ್ಟೇ ನಮಗೆ ಬೇಕು ಎಂದು ಹೇಳಿದರು.

ನಮ್ಮದು ಒಂದು ಒಂದು ಬೇಡಿಕೆ ಇತ್ತು, ದೇಶದ ಮುಖ್ಯಸ್ಥರಾಗಿ, ಪ್ರಧಾನಮಂತ್ರಿಗಳು ಸಂಸತ್ತಿಗೆ ಬರಬೇಕು, ಮಣಿಪುರ ಹಿಂಸಾಚಾರ ಕುರಿತು ಮಾತನಾಡಬೇಕು. ಎಲ್ಲಾ ಪಕ್ಷಗಳೂ ಅವರ ಬೆಂಬಲಕ್ಕಿದೆ ಎಂಬ ಧೈರ್ಯವನ್ನು ನೀಡಬೇಕು, ಮಣಿಪುರದಲ್ಲಿ ಶಾಂತಿ ನೆಲೆಸಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು.

ದುರದೃಷ್ಟವಶಾತ್, ಇದು ಆಗಲಿಲ್ಲ, ಬದಲಿಗೆ ಪ್ರಧಾನಮಂತ್ರಿಗಳು ಮೌನ ವ್ರತ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಅಥವಾ ರಾಜ್ಯಸಭೆಯಲ್ಲಿ ಈ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಹೀಗಾಗಿಯೇ ನಾವು ಅವಿಶ್ವಾಸ ನಿರ್ಣಯ ಮಂಡನೆ ಮಾಡಲೇಬೇಕಾಯಿತು. ಅವಿಶ್ವಾಸ ನಿರ್ಣಯದ ಮೂಲಕ ಮೋದಿಯವರ ಮೌನ ವ್ರತ ಮುರಿಯುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಪ್ರಧಾನಮಂತ್ರಿಗಳಿಗೆ 3 ಪ್ರಶ್ನೆಗಳನ್ನು ಕೇಳಿದ ಅವರು, ವಿರೋಧ ಪಕ್ಷದ ನಾಯಕರು ಹೋಗಿದ್ದಾರೆ. ಗೃಹ ಸಚಿವರೂ ಭೇಟಿ ನೀಡಿದ್ದಾರೆ. ದೇಶದ ಪ್ರಧಾನಮಂತ್ರಿಗಳಾಗಿ ನೀವು ಇನ್ನೂ ಮಣಿಪುರಕ್ಕೆ ಏಕೆ ಹೋಗಿಲ್ಲ?...

ಮಣಿಪುರದಲ್ಲಿ ಹಿಂಸಾಚಾರ ಸೃಷ್ಟಿಯಾಗಿ 80 ದಿನಗಳು ಕಳೆದಿವೆ. ಇನ್ನೂ ಈ ಕುರಿತು ಹೇಳಿಕೆ ನೀಡಲಿಲ್ಲವೇಕೆ?  30 ಸೆಕೆಂಡ್ ಗಳಷ್ಟಾದರೂ ಮಾತನಾಡುತ್ತಿಲ್ಲವೇಕೆ?ಶಾಂತಿ, ವಿನಂತಿಗಾಗಿ ನಿಮ್ಮ ಬಳಿ ಒಂದೂ ಪದವಿಲ್ಲವೇ?

ಪ್ರತೀ ಸಚಿವರೂ ನಾವು ಮಾತನಾಡುತ್ತಿದ್ದೇವೆಂದು ಹೇಳುತ್ತಿದ್ದಾರೆ. ಆದರೆ, ಪ್ರಧಾನಮಂತ್ರಿಗಳ ಮಾತು ಪ್ರಾಮುಖ್ಯವಾಗಿರುತ್ತದೆ. ಅವರ ಮಾತುಗಳಿಗೆ ತೂಕವಿರುತ್ತದೆ. ಸಚಿವರ ಮಾತುಗಳಿಗೂ ಪ್ರಧಾನಮಂತ್ರಿಗಳ ಮಾತಿಗೂ ವ್ಯತ್ಯಾಸಗಳಿರುತ್ತವೆ.

ಮಣಿಪುರದ ಮುಖ್ಯಮಂತ್ರಿಗಳನ್ನೇಕೆ ಇನ್ನೂ ಕೆಳಗಿಳಿಸಿಲ್ಲ. ಗುಜರಾತ್‌ನಲ್ಲಿ ರಾಜಕೀಯ ಮಾಡುವ ಸಮಯ ಬಂದಾಗ ನೀವು ಒಂದಲ್ಲ, ಎರಡು ಬಾರಿ ಮುಖ್ಯಮಂತ್ರಿಯನ್ನು ಬದಲಾಯಿಸಿದ್ದೀರಿ, ಉತ್ತರಾಖಂಡದಲ್ಲಿ 3-4 ಬಾರಿ ಬದಲಾಯಿಸಿದ್ದೀರಿ. ತ್ರಿಪುರಾದಲ್ಲೂ ಚುನಾವಣೆಗೂ ಮುನ್ನ ಮುಖ್ಯಮಂತ್ರಿಯನ್ನು ಬದಲಾಯಿಸಿದ್ದೀರಿ. ಮಣಿಪುರ ಮುಖ್ಯಮಂತ್ರಿಯ ವಿಶೇಷತೆ ಏನಿದೆ. ಅವರನ್ನೇಕೆ ಬದಲಿಸಲು ಹಿಂದೇಟು ಹಾಕುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದರು.

ಮಣಿಪುರಕ್ಕೆ ಭೇಟಿ ನೀಡಿದ ಪ್ರತಿಪಕ್ಷಗಳ ತಂಡವು ಅಲ್ಲಿನ ಕೋಮು ಘರ್ಷಮೆಯ ವ್ಯಾಪ್ತಿಯನ್ನು ಕಂಡು ಆಘಾತಕ್ಕೊಳಗಾಗಿವೆ. ಅಷ್ಟು ಮಟ್ಟರ ಕೋಮು ಘರ್ಷಣೆಯನ್ನು ಎಂದಿಗೂ ನೋಡಿರಲಿಲ್ಲ. ಸಮಾಜದ ಒಂದು ಪಂಗಡದವರು ಇನ್ನೊಂದು ಪಂಗಡದ ಬಗ್ಗೆ ಹೀಗೆ ಸೇಡಿನ ಮಾತುಗಳನ್ನಾಡುತ್ತಿರುವುದನ್ನು ನಾವು ಎಂದೂ ನೋಡಿಲ್ಲ. ಸರ್ಕಾರದ ಒಂದು ಭಾರತದ ಬಗ್ಗೆ ಮಾತನಾಡುತ್ತಿದೆ. ಆದರೆ, ಅಲ್ಲಿ ಎರಡು ಮಣಿಪುರಗಳನ್ನು ಸೃಷ್ಟಿಸಿದೆ. ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com