ಶ್ರೀಲಂಕಾದಿಂದ ಬಿಡುಗಡೆಯಾದ ಹತ್ತು ಭಾರತೀಯ ಮೀನುಗಾರರು ಚೆನ್ನೈಗೆ ಆಗಮನ
ಚೆನ್ನೈ: ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ಮತ್ತು ಶ್ರೀಲಂಕಾ ಸರ್ಕಾರದಿಂದ ಬಿಡುಗಡೆಯಾದ ಹತ್ತು ಭಾರತೀಯ ಮೀನುಗಾರರು ಮಂಗಳವಾರ ಚೆನ್ನೈ ವಿಮಾನ ನಿಲ್ದಾಣವನ್ನು ತಲುಪಿದರು.
ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಮತ್ತು ಈ ಸಂಬಂಧ ಅಗತ್ಯ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಶ್ರೀಲಂಕಾ ನ್ಯಾಯಾಲಯ ಆದೇಶ ನೀಡಿತ್ತು.
ಇದಕ್ಕೂ ಮೊದಲು ಆಗಸ್ಟ್ 22ರಂದು, ಶ್ರೀಲಂಕಾದ ಸಮುದ್ರದಲ್ಲಿ 'ಅಕ್ರಮ ಮೀನುಗಾರಿಕೆ'ಯಲ್ಲಿ ತೊಡಗಿದ್ದಕ್ಕಾಗಿ ಶ್ರೀಲಂಕಾ ನೌಕಾಪಡೆಯಿಂದ ಈ ಮೀನುಗಾರರನ್ನು ಬಂಧಿಸಲಾಗಿತ್ತು ಎಂದು ಶ್ರೀಲಂಕಾದ ಮೀನುಗಾರರ ಸಂಘ ತಿಳಿಸಿದೆ.
ತೂತುಕುಡಿಯಿಂದ ತೆರಳಿದ್ದ ತಮಿಳುನಾಡಿನ ಮೀನುಗಾರರನ್ನು ಶ್ರೀಲಂಕಾದ ಮುಲ್ಲೈತೀವು ಸಮುದ್ರದಲ್ಲಿ ಗಡಿಯಾಚೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಂಧಿಸಲಾಗಿತ್ತು. ಬಂಧಿತ 10 ಮೀನುಗಾರರನ್ನು ಮತ್ತು ಅವರ ದೋಣಿಗಳನ್ನು ಟ್ರಿಂಕೋಮಲಿ ಬಂದರಿಗೆ ಕರೆದೊಯ್ಯಲಾಯಿತು.
ಈ ಮೀನುಗಾರರ ಕುಟುಂಬಗಳು ಮತ್ತು ರಾಮೇಶ್ವರಂನ ಮೀನುಗಾರರ ಸಮುದಾಯಕ್ಕೆ ಸೇರಿದ ಸ್ಥಳೀಯರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಶ್ರೀಲಂಕಾ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ರಾಜ್ಯ ಮತ್ತು ಕೇಂದ್ರಕ್ಕೆ ಮನವಿ ಮಾಡಿದ್ದವು.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮೀನುಗಾರರರು ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿದಾಗ ಪಡುತ್ತಿರುವ ಹೋರಾಟದ ಬಗ್ಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ತಮಿಳುನಾಡಿನ ಕರಾವಳಿ ಜಿಲ್ಲೆಯಿಂದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಮೀನುಗಾರರನ್ನು ಶ್ರೀಲಂಕಾದ ಸಮುದ್ರಕ್ಕೆ ಅತಿಕ್ರಮಣ ಮತ್ತು ಮೀನುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ನಾಗಪಟ್ಟಣಂನಿಂದ ಬಂಧಿತ ಮೀನುಗಾರರನ್ನು ಟ್ರಿಂಕೋಮಲಿ ಬಂದರಿಗೆ ಕರೆದೊಯ್ಯಲಾಗುತ್ತಿದೆ ಎಂದು ರಾಮೇಶ್ವರಂ ಪೊಲೀಸರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಶ್ರೀಲಂಕಾದ ನೌಕಾಪಡೆಯು ದೋಷದಿಂದಾಗಿ ಲಂಕಾದ ನೀರಿನಲ್ಲಿ ದೋಣಿ ತೇಲಿಹೋಗಿ ಸಿಕ್ಕಿಬಿದ್ದ ಆರು ಭಾರತೀಯ ಮೀನುಗಾರರನ್ನು ರಕ್ಷಿಸಿತ್ತು. ತಮಿಳುನಾಡಿನ ರಾಮೇಶ್ವರಂ ಮೂಲದ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ