ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಮುಂದೆ ಅನುಸರಿಸಬೇಕಾದ ಕಾರ್ಯತಂತ್ರ ಕುರಿತಂತೆ ಆಡಳಿತಾರೂಢ ಬಿಜೆಪಿ ಹಾಗೂ ಸಮಾನ ಮನಸ್ಕ ವಿಪಕ್ಷಗಳು ಪ್ರತ್ಯೇಕ ಸಭೆ ನಡೆಸಿ, ಸಮಾಲೋಚನೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಅನುರಾಗ್ ಠಾಕೂರ್, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಕಿರಣ್ ರಿಜಿಜು ಮತ್ತಿತರರು ಪಾಲ್ಗೊಂಡು, ಸಂಸತ್ತಿನಲ್ಲಿ ಸರ್ಕಾರದ ಕಾರ್ಯತಂತ್ರ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಪ್ರತಿಪಕ್ಷಗಳು ಯಾವುದೇ ವಿಷಯ ಪ್ರಸ್ತಾಪಿಸಿ, ಬಜೆಟ್ ಮತ್ತು ರಾಷ್ಟ್ರಪತಿಗಳ ಭಾಷಣ ಕುರಿತು ಸಕಾರಾತ್ಮಕ ಸಲಹೆ ನೀಡಲಿ, ಸಂಸತ್ ಅಧಿವೇಶನ ಸುಗಮವಾಗಿ ಸಾಗಲು ಸಹಕಾರ ನೀಡಲಿ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಇನ್ನೂ ಸಮಾನ ಮನಸ್ಕ ವಿಪಕ್ಷಗಳು ಕೂಡಾ ಪ್ರತ್ಯೇಕ ಸಭೆ ನಡೆಸಿದ್ದು, ಸದನದಲ್ಲಿ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರ ಕುರಿತಂತೆ ಸಮಾಲೋಚಿಸಿದ್ದಾರೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹಿರಿಯ ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್ , ಡಿಎಂಕೆಯ ಕನ್ನಿಮೋಳಿ, ಶಿವಸೇನೆಯ ಸಂಜಯ್ ರಾವತ್ ಮತ್ತಿತರರು ಪಾಲ್ಗೊಂಡು, ಚರ್ಚಿಸಿದ್ದಾರೆ.
ಬಳಿಕ ಮಾತನಾಡಿದ ಸಂಜಯ್ ರಾವತ್, ಉಭಯ ಸದನಗಳಲ್ಲಿ ಹಿಂಡೆನ್ಬರ್ಗ್ ವರದಿ ಮತ್ತು ಅದಾನಿ ಸ್ಟಾಕ್ ಕುಸಿತ ಕುಸಿತಂತೆ ಧ್ವನಿ ಎತ್ತಲಾಗುವುದು ಎಂದು ತಿಳಿಸಿದ್ದಾರೆ.
Advertisement