ಲಖನೌ: ದೇಶದಲ್ಲಿ ಮತ್ತೊಂದು ಹಿಟ್ ಅಂಡ್ ಡ್ರ್ಯಾಗ್ ಪ್ರಕರಣ ಬೆಳಕಿಗೆ ಬಂದಿದ್ದು, ಉತ್ತರ ಪ್ರದೇಶದ ಮಥುರಾ ಬಳಿಯ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಮಂಗಳವಾರ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರೊಂದು ಅಪರಿಚಿತ ವ್ಯಕ್ತಿಗೆ ಡಿಕ್ಕು ಹೊಡೆದಿದ್ದು, ಚಾಲಕ ದೇಹವನ್ನು 10 ಕಿ.ಮೀ.ಗೂ ಹೆಚ್ಚು ದೂರ ಎಳೆದೊಯ್ದಿರುವ ದಾರುಣ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಪುರುಷ ಮತ್ತು ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಮಥುರಾ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಭಾಗಿಯಾದ ಸ್ವಿಫ್ಟ್ ಡಿಜೈರ್ ಕಾರನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ದೆಹಲಿ ನಿವಾಸಿ ವೀರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ದಟ್ಟವಾದ ಮಂಜು ಮತ್ತು ಕಳಪೆ ಗೋಚರತೆಯಿಂದ ವ್ಯಕ್ತಿ ಕಾರಿಗೆ ಸಿಲುಕಿರುವುದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಎಕ್ಸ್ಪ್ರೆಸ್ವೇಯಲ್ಲಿ ದಟ್ಟವಾದ ಮಂಜಿನಿಂದಾಗಿ ಕಡಿಮೆ ಗೋಚರತೆ ಇತ್ತು ಎಂದು ಸಿಂಗ್ ಹೇಳಿದ್ದಾರೆ.
"ಅಪಘಾತಕ್ಕೆ ಒಳಗಾದ ವ್ಯಕ್ತಿ ತನ್ನ ಕಾರಿಗೆ ಅಡ್ಡ ಬಂದರು ಎಂದು ಆರೋಪಿ ಚಾಲಕ ಹೇಳಿರುವುದಾಗಿ" ಪೊಲೀಸ್ ವರಿಷ್ಠಾಧಿಕಾರಿ ಟ್ರಿಗುನ್ ಬಿಸೆನ್ ಅವರು ತಿಳಿಸಿದ್ದಾರೆ.
Advertisement