ನವದೆಹಲಿ: ಇದೇ ಗುರುವಾರ ನಡೆಯಬೇಕಿದ್ದ ದೆಹಲಿಯ ಮೇಯರ್ ಚುನಾವಣೆ ಮತ್ತೆ ಮುಂದೂಡಿಕೆಯಾಗಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹಾಗೂ ಭಾರತೀಯ ಜನತಾ ಪಾರ್ಟಿ (BJP) ನಡುವಿನ ಹಗ್ಗಜಗ್ಗಾಟ ಇದೀಗ ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಗಿದೆ.
ಹೌದು.. ದೆಹಲಿ ಮೇಯರ್ ಚುನಾವಣೆ ವಿಚಾರವಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿರುವುದರಿಂದ ಚುನಾವಣೆಯನ್ನು ಮುಂದೂಡಲಾಗಿದೆ. ಫೆಬ್ರವರಿ 16 ರ ಚುನಾವಣೆಯನ್ನು ಫೆಬ್ರವರಿ 17 ರ ನಂತರದ ದಿನಾಂಕಕ್ಕೆ ಮುಂದೂಡುವುದಾಗಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಮೇಯರ್ ಚುನಾವಣೆಯನ್ನು ಶೀಘ್ರವಾಗಿ ನಡೆಸುವಂತೆ ಕೋರಿ ಆಪ್ ಮೇಯರ್ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು ಸಲ್ಲಿಸಿದ್ದ ಮನವಿಯನ್ನು ಫೆಬ್ರವರಿ 17ಕ್ಕೆ ಮುಂದೂಡಿದ್ದು, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ನಾಮನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ಅವರು ತಕರಾರು ಅರ್ಜಿ ಸಲ್ಲಿಸಿದ್ದರು. ಇದೇ ವಿಚಾರವಾಗಿ ನಡೆದ ವಿಚಾರಣೆಯಲ್ಲಿ "ನಾಮನಿರ್ದೇಶಿತ ಸದಸ್ಯರು ಚುನಾವಣೆಗೆ ಹೋಗುವಂತಿಲ್ಲ. ಸಾಂವಿಧಾನಿಕ ನಿಬಂಧನೆಯು ತುಂಬಾ ಸ್ಪಷ್ಟವಾಗಿದೆ" ಎಂದು ಆಮ್ ಆದ್ಮಿ ಪಕ್ಷದ ಸಮರ್ಥನೆಯನ್ನು ಪೀಠವು ಗಮನಿಸಿದೆ. ಅಂತೆಯೇ ಸುಪ್ರೀಂ ಕೋರ್ಟ್ ಪೀಠವು ಶುಕ್ರವಾರ ವಿಚಾರಣೆಗೆ ವಿಷಯವನ್ನು ಮುಂದೂಡುತ್ತಿದ್ದಂತೆ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿಯನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಫೆಬ್ರವರಿ 16 ರ ಚುನಾವಣೆಯನ್ನು ಫೆಬ್ರವರಿ 17 ರ ನಂತರದ ದಿನಾಂಕಕ್ಕೆ ಮುಂದೂಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಎಎಪಿಯವರು ದೆಹಲಿ ಮೇಯರ್ ಆಗುತ್ತಾರೆ: ಬಿಜೆಪಿ
ಒಬೆರಾಯ್ ಅವರ ಮನವಿಯ ಕುರಿತು ಫೆಬ್ರವರಿ 8 ರಂದು ಸುಪ್ರೀಂ ಕೋರ್ಟ್ ಲೆಫ್ಟಿನೆಂಟ್ ಗವರ್ನರ್ ಕಚೇರಿ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಯ ಪ್ರೊ ಟೆಮ್ ಪ್ರಿಸೈಡಿಂಗ್ ಅಧಿಕಾರಿ ಸತ್ಯ ಶರ್ಮಾ ಮತ್ತು ಇತರರಿಂದ ಪ್ರತಿಕ್ರಿಯೆಗಳನ್ನು ಕೇಳಿತ್ತು. ಇದೀಗ ಮತ್ತೆ ಮೇಯರ್ ಆಯ್ಕೆ ಚುನಾವಣೆ ಮುಂದೂಡಲ್ಪಟ್ಟಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿ ನಡುವಿನ ಸುದೀರ್ಘ ಜಗಳದ ನಡುವೆ ಮೇಯರ್ ಆಯ್ಕೆಗೆ ಮೂರು ಬಾರಿ ವಿಫಲ ಪ್ರಯತ್ನಗಳು ನಡೆದಿದ್ದವು. ಮೂರು ಪ್ರಯತ್ನಗಳು ವಿಫಲವಾಗಿ ಪದೇ ಪದೇ ಚುನಾವಣೆ ಮುಂದೂಡಿಕೆಯಾಗಿತ್ತು.
Advertisement