ನವದೆಹಲಿ: ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸದನದಲ್ಲಿ ಬುಧವಾರ ಸ್ಥಾಯಿ ಸಮಿತಿಯ ಸದಸ್ಯರ ಚುನಾವಣೆಯ ಸಂದರ್ಭದಲ್ಲಿ ಮಾರಾಮಾರಿ ನಡೆದಿದೆ. ಬಿಜೆಪಿ ಕೌನ್ಸಿಲರ್ ಗಳ ಸದನದಲ್ಲಿ ತಮ್ಮ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ನೂತನ ಮೇಯರ್ ಶೆಲ್ಲಿ ಒಬೆರಾಯ್ ಆರೋಪಿಸಿದ್ದಾರೆ. ಸ್ಥಾಯಿ ಸಮಿತಿ ಚುನಾವಣೆ ನಡೆಸುತ್ತಿದ್ದ ವೇಳೆ ತಮ್ಮ ಮೇಲೆ ಬಾಟಲಿಗಳನ್ನು ಎಸೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಸ್ಥಾಯಿ ಸಮಿತಿ ಚುನಾವಣೆ ನಡೆಸುತ್ತಿದ್ದಾಗ ಬಿಜೆಪಿ ಕೌನ್ಸಿಲರ್ಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ! ಇದು ಬಿಜೆಪಿಯ ಗುಂಡಾಗಿರಿಯಾಗಿದ್ದು, ಮಹಿಳಾ ಮೇಯರ್ ಮೇಲೆ ಅವರು ದಾಳಿ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಒಬೆರಾಯ್ ಟ್ವೀಟ್ ಮಾಡಿದ್ದಾರೆ.
ಮತಗಟ್ಟೆಗಳ ಒಳಗೆ ಮೊಬೈಲ್ ಫೋನ್ಗಳನ್ನು ಬಳಸಿ ಫೋಟೋ ತೆಗೆಯುವುದರ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು. ಸದನದ ಕಲಾಪಗಳ ಸಮಯದಲ್ಲಿ, ಬಿಜೆಪಿ ಕಾರ್ಪೊರೇಟರ್ ಶಿಖಾ ರೈ ಅವರು ಮೇಯರ್ ಬಳಿಗೆ ತೆರಳಿ ಮೈಕ್ ಕಸಿದುಕೊಳ್ಳಲು ಪ್ರಯತ್ನಿಸಿದರು ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್, ಈ ಘಟನೆ ಆತಂಕಕಾರಿಯಾಗಿದ್ದು,ಸ್ವೀಕರಿಸಲಾಗದು ಎಂದಿದ್ದಾರೆ.
Advertisement