ದೆಹಲಿ: ಮಹಿಳೆಯನ್ನು 13 ಕಿ.ಮೀ ಎಳೆದೊಯ್ದಿದ್ದ ಕಾರನ್ನು ಕೆಲವೇ ಗಂಟೆಗಳ ಮುನ್ನ ಪಡೆದಿದ್ದ ಆರೋಪಿ
ದೆಹಲಿ: ಹೊಸ ವರ್ಷಾಚರಣೆ ದಿನದಂದು ಸಂಭವಿಸಿದ್ದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಒಂದೊಂದೇ ಬೆಚ್ಚಿ ಬೀಳಿಸುವ ಅಂಶಗಳು ಹೊರಬರುತ್ತಿವೆ.
ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ 20 ವರ್ಷದ ಮಹಿಳೆಗೆ ಬಲೇನೋ ಕಾರು ಡಿಕ್ಕಿ ಹೊಡೆದ ಪರಿಣಾಮ ಆ ಮಹಿಳೆ ಕಾರಿನ ಅಡಿ ಸಿಲುಕಿದ್ದರು, 13 ಕಿ.ಮೀ ವರೆಗೂ ಮಹಿಳೆಯ ದೇಹ ಕಾರಿನ ಅಡಿಯಲ್ಲಿ ಸಿಲುಕಿ ಎಳೆದೊಯ್ದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿ ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ನಾಯಕನ ವಿರುದ್ಧವೂ ಆರೋಪ ಕೇಳಿಬಂದಿದ್ದು, ಹಲವು ಸಂಗತಿಗಳು ಬಹಿರಂಗವಾಗುತ್ತಿವೆ.
ಪೊಲೀಸರ ಎಫ್ಐಆರ್ ಪ್ರಕಾರ, ಕಾರಿನಲ್ಲಿದ್ದ ವ್ಯಕ್ತಿಗಳು ತಾವು ಮದ್ಯಪಾನ ಮಾಡಿ ಕಾರು ಚಲಿಸುತ್ತಿದ್ದೆವು, ಮಹಿಳೆ ಸ್ಕೂಟಿಯಿಂದ ಬಿದ್ದ ನಂತರ ತಪ್ಪಿಸಿಕೊಳ್ಳಲು ಯತ್ನಿಸಿದೆವು ಎಂದು ಒಪ್ಪಿಕೊಂಡಿರುವುದಾಗಿ ಎಫ್ಐಆರ್ ತಿಳಿಸಿದೆ.
ಮೃತ ಅಂಜಲಿ ಸಿಂಗ್ ಕೆಲಸ ಮುಕ್ತಾಯಗೊಳಿಸಿ ಬೆಳಿಗ್ಗೆ 2ಗಂಟೆಗೆ ವಾಪಸ್ಸಾಗುತ್ತಿದ್ದಾಗ, ಈ ಅವಘಡ ಸಂಭವಿಸಿತ್ತು.
ಘಟನೆಯಲ್ಲಿ ಉಲ್ಲೇಖವಾಗಿರುವ ಮಾರುತಿ ಬಲೇನೋ ಕಾರನ್ನು ಎರಡು ಬಾರಿ ಮಾರಾಟ ಮಾಡಲಾಗಿತ್ತು, ಘಟನೆಯ ಕೆಲವೇ ಗಂಟೆಗಳ ಹಿಂದೆ ಆರೋಪಿ ಕಾರನ್ನು ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನ ಮಾಲಿಕ ಲೋಕೇಶ್ ಅದನ್ನು ಅಶುತೋಷ್ ಎಂಬಾತನಿಗೆ ನೀಡಿದ್ದ, ಅದನ್ನು ಅಶುತೋಶ್ ತನ್ನ ಸ್ನೇಹಿತರಾದ ಅಮಿತ್ ಹಾಗೂ ದೀಪಕ್ ಖನ್ನಾಗೆ ನೀಡಿದ್ದರು ಎಂದು ತಿಳಿದುಬಂದಿದೆ. ಘಟನೆ ನಡೆದಾಗ ಖನ್ನಾ ಹಾಗೂ ಸ್ನೇಹಿತರು ಕಾರಿನಲಿದ್ದರು. ಈ ಪೈಕಿ ಸ್ಥಳೀಯ ಬಿಜೆಪಿ ನಾಯಕ ಮನೋಜ್ ಮಿತ್ತಲ್ ಸಹ ಕಾರಿನಲ್ಲಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ