ಕೋವಿಡ್-19 ಕುರಿತು ಭಯಬೇಡ, ಜಾಗರೂಕರಾಗಿರಿ ಮತ್ತು ವದಂತಿಗಳಿಂದ ದೂರವಿರಿ: ಕೇಂದ್ರ ಸರ್ಕಾರ

ಕೋವಿಡ್-19 ಕುರಿತು ಜನರು ಭಯಭೀತರಾಗಬಾರದು, ಜಾಗರೂಕರಾಗಿರಬೇಕು ಮತ್ತು ವದಂತಿಗಳಿಂದ ದೂರವಿರಬೇಕು  ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

ನವದೆಹಲಿ: ಕೋವಿಡ್-19 ಕುರಿತು ಜನರು ಭಯಭೀತರಾಗಬಾರದು, ಜಾಗರೂಕರಾಗಿರಬೇಕು ಮತ್ತು ವದಂತಿಗಳಿಂದ ದೂರವಿರಬೇಕು  ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರು ಮಾತನಾಡಿದ್ದು, ಕೋವಿಡ್ ಕುರಿತು ಜನರು ಭಯಪಡಬಾರದು. ಕಾಲಕಾಲಕ್ಕೆ ಸರ್ಕಾರ ನೀಡುವ ನಿರ್ದೇಶನ, ಸೂಚನೆಗಳನ್ನು ಅನುಸರಿಸಬೇಕೆಂದು ಹೇಳಿದ್ದಾರೆ.

ಕೋವಿಡ್ -19 ರೂಪಾಂತರಗಳು ಬರುತ್ತಲೇ ಇರುತ್ತವೆ. ಆದರೆ, ಯಾವ ರೂಪಾಂತರವು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಮುಖ್ಯ ವಿಷಯವಾಗುತ್ತದೆ. ದೇಶದಲ್ಲಿ ಯಾವುದೇ ರೀತಿಯ ಭೀತಿಯನ್ನು ತಪ್ಪಿಸಲು ಜನರು ಸರ್ಕಾರಿ ಮೂಲಗಳು ಹಂಚಿಕೊಂಡ ಮಾಹಿತಿಯನ್ನು ಮಾತ್ರ ನಂಬಬೇಕು. ಕೋವಿಡ್ ಪರಿಸ್ಥಿತಿ ಎದುರಿಸಲು ಸರಕಾರ ಸಕಲ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದರು.

ಏತನ್ಮಧ್ಯೆ, ಭಾರತದಲ್ಲಿ ಡಿಸೆಂಬರ್ 24 ರಿಂದ ಜನವರಿ 3 ರ ನಡುವೆ ವಿಮಾನ ನಿಲ್ದಾಣಗಳಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷಿಸುವಾಗ ಹನ್ನೊಂದು ರೀತಿಯ ಕೋವಿಡ್ ರೂಪಾಂತರ ವೈರಸ್ ಗಳನ್ನು ಪತ್ತೆ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದೇಶಕ್ಕೆ ಬಂದ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ  ಒಟ್ಟು 19,227 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 124 ಪಾಸಿಟಿವ್ ಎಂದು ಕಂಡುಬಂದಿದ್ದು, ಸೋಂಕು ಕಂಡು ಬಂದವನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಎಂದು ಮೂಲಗಳು ತಿಳಿಸಿವೆ.

124 ಮಂದಿ ಸೋಂಕಿತರ ಪೈಕಿ 40 ಮಂದಿಯ ಮಾದರಿಯನ್ನು ಜೀನೋಮ್ ಅನುಕ್ರಮಕ್ಕೆ ಕಳುಹಿಸಲಾಗಿದೆ. ಈ ಪೈಕಿ 14 ಮಂದಿಯಲ್ಲಿ ವಿವಿಧ ರೂಪಾಂತರಿ ವೈರಸ್ ಗಳು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿದೆ.

ಈ 14 ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರ ಜೀನೋಮಿಕ್ ಅನುಕ್ರಮದಲ್ಲಿ BA.5.2, BQ.1.1, BQ. 1.1(22), BQ.1.1.5, CH.1.1, CH.1.1.1, BB.3, BN.1.2, BN1.3, BY1 ಮತ್ತು BF ರೂಪಾಂತರಿ ವೈರಸ್ ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com