ಶಿಕ್ಷಕರ ತರಬೇತಿಗೆ ತಡೆ: ಬಿಜೆಪಿಯಿಂದ ಕೊಳಕು ರಾಜಕೀಯ ಎಂದ ದೆಹಲಿ ಡಿಸಿಎಂ ಸಿಸೋಡಿಯಾ
ಶಾಲಾ ಶಿಕ್ಷಕರನ್ನು ತರಬೇತಿಗಾಗಿ ಫಿನ್ಲ್ಯಾಂಡ್ಗೆ ಕಳುಹಿಸುವ ಎಎಪಿ ಸರ್ಕಾರದ ಪ್ರಯತ್ನಗಳನ್ನು ತಡೆಯುತ್ತಿರುವ ಬಿಜೆಪಿ, ಕೊಳಕು ರಾಜಕೀಯ ಮಾಡುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು...
Published: 13th January 2023 01:05 PM | Last Updated: 18th January 2023 04:34 PM | A+A A-

ಮನೀಶ್ ಸಿಸೋಡಿಯಾ
ನವದೆಹಲಿ: ಶಾಲಾ ಶಿಕ್ಷಕರನ್ನು ತರಬೇತಿಗಾಗಿ ಫಿನ್ಲ್ಯಾಂಡ್ಗೆ ಕಳುಹಿಸುವ ಎಎಪಿ ಸರ್ಕಾರದ ಪ್ರಯತ್ನಗಳನ್ನು ತಡೆಯುತ್ತಿರುವ ಬಿಜೆಪಿ, "ಕೊಳಕು ರಾಜಕೀಯ" ಮಾಡುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಡಿಸಿಎಂ, ಇದುವರೆಗೆ ಸುಮಾರು 1,100 ಶಿಕ್ಷಕರು ಸಿಂಗಾಪುರ, ಬ್ರಿಟನ್ ಮತ್ತು ಫಿನ್ಲ್ಯಾಂಡ್ ಸೇರಿದಂತೆ ಹಲವು ವಿದೇಶಗಳಲ್ಲಿ ತರಬೇತಿ ಪಡೆದಿದ್ದಾರೆ.
ಈಗ ಶಿಕ್ಷಣ ಇಲಾಖೆಯ ಮೇಲೆ ಹಿಡಿತ ಹೊಂದಿರುವ ಬಿಜೆಪಿಯ ಕೆಲವು ಅನಧಿಕೃತ ವ್ಯಕ್ತಿಗಳು, ದೆಹಲಿಯ ಎಎಪಿ ಸರ್ಕಾರವು ಶಿಕ್ಷಕರಿಗೆ ಉತ್ತಮ ತರಬೇತಿ ನೀಡುವುದನ್ನು ತಡೆಯುತ್ತಿದ್ದಾರೆ. ಈ ಮೂಲಕ "ಕೊಳಕು ರಾಜಕೀಯ" ಮಾಡುತ್ತಿದ್ದಾರೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೆನಾ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ ಮತ್ತು ಅವರ ಶಿಕ್ಷಣದ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂದು ಬಯಸುತ್ತಿದ್ದರೆ, "ಈ ಪಿತೂರಿಯಲ್ಲಿ ಬಿಜೆಪಿಯ ಪರವಾಗಿರಬಾರದು" ಎಂದು ಸಿಸೋಡಿಯಾ ಹೇಳಿದ್ದಾರೆ.
ಸಿಸೋಡಿಯಾ ಅವರ ಆರೋಪದ ಬಗ್ಗೆ ಬಿಜೆಪಿ ಅಥವಾ ಲೆಫ್ಟಿನೆಂಟ್ ಗವರ್ನರ್ ಕಚೇರಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
"ನಾವು 30 ಶಿಕ್ಷಕರ ಬ್ಯಾಚ್ ಅನ್ನು ತರಬೇತಿಗಾಗಿ ಫಿನ್ಲ್ಯಾಂಡ್ಗೆ ಕಳುಹಿಸಲು ಬಯಸಿದ್ದೇವೆ. ಆದರೆ ಲೆಫ್ಟಿನೆಂಟ್ ಗವರ್ನರ್ ಅದನ್ನು ಒಂದಲ್ಲ ಒಂದು ನೆಪ ನೀಡಿ ವಿಳಂಬ ಮಾಡುತ್ತಿದ್ದಾರೆ" ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಶಾಲಾ ಶಿಕ್ಷಕರನ್ನು ತರಬೇತಿಗಾಗಿ ಫಿನ್ಲ್ಯಾಂಡ್ಗೆ ಕಳುಹಿಸುವ ದೆಹಲಿ ಸರ್ಕಾರದ ಪ್ರಯತ್ನಗಳನ್ನು ತಡೆಯಲು ಬಿಜೆಪಿ ತನ್ನ ಎಲ್ಲಾ ಶಕ್ತಿಯನ್ನು ಬಳಸುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಆರೋಪಿಸಿದ್ದಾರೆ.