ಜೆಡಿಯು ಸಂಸ್ಥಾಪಕ ಅಧ್ಯಕ್ಷರಾಗಿದ್ದ ಶರದ್ ಯಾದವ್ ನಿಧನ!

ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಇಂದು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು.
ಶರದ್ ಯಾದವ್
ಶರದ್ ಯಾದವ್

ನವದೆಹಲಿ: ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಇಂದು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು.

ಶರದ್ ಯಾದವ್ ತಮ್ಮ 75ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದು ಶರದ್ ಅವರ ನಿಧನದ ಸುದ್ದಿಯನ್ನು ಪುತ್ರಿ ಖಚಿತಪಡಿಸಿದ್ದಾರೆ. ಬಿಹಾರದ ರಾಜಕೀಯದಲ್ಲಿ ಪ್ರತ್ಯೇಕವಾದ ಗುರುತನ್ನು ಹೊಂದಿದ್ದ ಶರದ್ ಯಾದವ್ ಅವರ ಅಗಲಿಕೆ ಎಲ್ಲರನ್ನೂ ಕಂಗಾಲಾಗಿಸಿದೆ. ಅವರ ಸಮಾಜವಾದಿ ರಾಜಕೀಯವು ಅವರನ್ನು ಸಾರ್ವಜನಿಕರಲ್ಲಿ ಜನಪ್ರಿಯಗೊಳಿಸಿತು. ಆದರೆ ಇದೀಗ ಆ ಮಹಾನ್ ನಾಯಕ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ.

ಶರದ್ ಯಾದವ್ ಅವರ ಪುತ್ರಿ ಸುಭಾಷಿಣಿ ತಮ್ಮ ತಂದೆಯ ನಿಧನಕ್ಕೆ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ತಂದೆ ಇನ್ನಿಲ್ಲ ಎಂದು ಬರೆದುಕೊಂಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಶರದ್ ಯಾದವ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಫೋರ್ಟಿಸ್ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. ಅವರಲ್ಲಿ ಸ್ಪಂದನೆ ಇರಲಿಲ್ಲ. ಪ್ರೋಟೋಕಾಲ್ ಪ್ರಕಾರ ಅವರಿಗೆ ಸಿಪಿಆರ್ ನೀಡಲಾಗಿತ್ತು. ಎಷ್ಟೇ ಪ್ರಯತ್ನಪಟ್ಟರು ಅವರನ್ನು ಉಳಿಸಲಾಗಲಿಲ್ಲ. ರಾತ್ರಿ 10.19ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದರು.

ಈ ಸಮಾಜವಾದಿ ನಾಯಕನ ಅಗಲಿಕೆಯಿಂದಾಗಿ ರಾಜಕೀಯ ಪಡಸಾಲೆಯಲ್ಲೂ ಶೋಕ ಆವರಿಸಿದೆ. ಶರದ್ ಯಾದವ್ ಅವರ ಅಗಲಿಕೆಯಿಂದ ನನಗೆ ಅತೀವ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಸಂಸದರಾಗಿ ಮತ್ತು ಸಚಿವರಾಗಿ ವಿಶಿಷ್ಟ ಗುರುತನ್ನು ಹೊಂದಿದ್ದರು. ಲೋಹಿಯಾ ಅವರ ವಿಚಾರಗಳಿಂದ ಅವರು ಹೆಚ್ಚು ಪ್ರೇರಿತರಾಗಿದ್ದರು. ನಾನು ಅವರೊಂದಿಗೆ ನಡೆಸಿದ ಪ್ರತಿಯೊಂದು ಸಂಭಾಷಣೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬಕ್ಕೆ ಸಂತಾಪ. ಓಂ ಶಾಂತಿ ಎಂದು ಬರೆದಿದ್ದಾರೆ.

ಶರದ್ ಯಾದವ್ ಅವರ ರಾಜಕೀಯ, ವೈಯಕ್ತಿಕ ಜೀವನ
1947ರಲ್ಲಿ ಮಧ್ಯಪ್ರದೇಶದ ಹೋಶಂಗಾಬಾದ್‌ನ ಹಳ್ಳಿಯಲ್ಲಿ ಶರದ್ ಯಾದವ್ ಜನಿಸಿದ್ದರು. 1971ರಲ್ಲಿ ಅವರು ತಮ್ಮ ಎಂಜಿನಿಯರಿಂಗ್ ಅಧ್ಯಯನವನ್ನು ಪೂರ್ಣಗೊಳಿಸಿದರು. ಡಾ. ರಾಮ್ ಮನೋಹರ್ ಲೋಹಿಯಾ ಅವರ ವಿಚಾರಗಳಿಂದ ಪ್ರೇರಿತರಾಗಿ ಸಕ್ರಿಯ ಯುವ ನಾಯಕರಾಗಿ, ಶರದ್ ಯಾದವ್ ಅವರು ಅನೇಕ ಚಳುವಳಿಗಳಲ್ಲಿ ಭಾಗವಹಿಸಿದರು. 1969-70, 1972 ಮತ್ತು 1975 ರಲ್ಲಿ MISA ಅಡಿಯಲ್ಲಿ ಬಂಧಿತರಾಗಿದ್ದರು. ಶರದ್ ಯಾದವ್ 1974ರಲ್ಲಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಅವರು ಮೊದಲು ಮಧ್ಯಪ್ರದೇಶದ ಜಬಲ್‌ಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಇದು ಜೆಪಿ ಚಳವಳಿಯ ಸಮಯ ಮತ್ತು ಜೆಪಿ ಅವರು ಹಲ್ದಾರ್ ಕಿಸಾನ್ ಆಗಿ ಆಯ್ಕೆ ಮಾಡಿದ ಮೊದಲ ಅಭ್ಯರ್ಥಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com