ಕೇಂದ್ರ ಬಜೆಟ್ ಮಂಡನೆ: ಇಂದು ನೀತಿ ಆಯೋಗದಲ್ಲಿ ಆರ್ಥಿಕ ತಜ್ಞರ ಜೊತೆ ಪ್ರಧಾನಿ ಮೋದಿ ಸಭೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಶುಕ್ರವಾರ ನೀತಿ ಆಯೋಗ ಕಚೇರಿಯಲ್ಲಿ ಆರ್ಥಿಕ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಶುಕ್ರವಾರ ನೀತಿ ಆಯೋಗ ಕಚೇರಿಯಲ್ಲಿ ಆರ್ಥಿಕ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. 

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಮುಂದಿನ ತಿಂಗಳು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಗೆ ಮುನ್ನ ಆರ್ಥಿಕ ತಜ್ಞರ ಸಲಹೆ, ಅಭಿಪ್ರಾಯಗಳನ್ನು ಕೇಳಲು ಮತ್ತು ಭಾರತದ ಆರ್ಥಿಕತೆಯ ಪರಿಸ್ಥಿತಿ, ಅದರ ಸವಾಲುಗಳನ್ನು ಪರಿಶೀಲಿಸಲು ಪ್ರಧಾನ ಮಂತ್ರಿಗಳು ಈ ಸಭೆ ನಡೆಸುತ್ತಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗುವ ಸಾಧ್ಯತೆಯಿದ್ದು, ಏಪ್ರಿಲ್ 6ರಂದು ಮುಗಿಯುವ ಅಂದಾಜಿದೆ. ಎರಡು ಹಂತಗಳಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ.

ಬಜೆಟ್ ಅಧಿವೇಶನ ಆರಂಭಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

ದ್ರೌಪದಿ ಮುರ್ಮು ಅವರು ಪ್ರಧಾನಿಯಾದ ಬಳಿಕ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಅವರ ಮೊದಲ ಭಾಷಣವಾಗಿರುತ್ತದೆ.

ಕೇಂದ್ರ ಬಜೆಟ್ ಅಧಿವೇಶನದ ಮೊದಲ ದಿನ ಉಭಯ ಸದನಗಳಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸುವ ಸಾಧ್ಯತೆಯಿದೆ. ಬಜೆಟ್ ಅಧಿವೇಶನದ ಮೊದಲ ಹಂತ ಫೆಬ್ರವರಿ 10ರಂದು ಮುಕ್ತಾಯಗೊಳ್ಳಲಿದೆ. 

ಈ ಬಾರಿಯ ಬಜೆಟ್ ನಲ್ಲಿ ಹಲವು ಸಚಿವಾಲಯಗಳ ಅನುದಾನ ಬಗ್ಗೆ ಸ್ಥಾಯಿ ಸಮಿತಿ ಪರಿಶೀಲಿಸಲಿದೆ. ನಂತರ ಬಜೆಟ್ ಅಧಿವೇಶನದ ಎರಡನೇ ಭಾಗ ಮಾರ್ಚ್ 6ರಂದು ಆರಂಭಗೊಂಡು ಏಪ್ರಿಲ್ 6ಕ್ಕೆ ಮುಗಿಯಲಿದೆ.

ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ನಂತರ ಕೇಂದ್ರ ಬಜೆಟ್ ಬಗ್ಗೆ ಚರ್ಚೆ ನಡೆಯಲಿದೆ. ರಾಷ್ಟ್ರಪತಿಗಳ ಭಾಷಣ ಕ್ಕೆ ಸಲ್ಲಿಸಲಾಗುವ ವಂದನಾ ನಿರ್ಣಯಕ್ಕೆ ಪ್ರಧಾನ ಮಂತ್ರಿಗಳು ಉತ್ತರ ನೀಡಲಿದ್ದಾರೆ. ಹಣಕಾಸು ಸಚಿವರು ನಂತರ ಕೇಂದ್ರ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಲಿದ್ದಾರೆ.

ಬಜೆಟ್ ಅಧಿವೇಶನದ ಎರಡನೇ ಭಾಗದಲ್ಲಿ, ಸರ್ಕಾರದ ವಿವಿಧ ಸಚಿವಾಲಯಗಳಿಗೆ ಇರುವ ಅನುದಾನದ ಬೇಡಿಕೆಯ ಮೇಲಿನ ಚರ್ಚೆಗಳಿಗೆ ಆದ್ಯತೆ ಇರುತ್ತದೆ.ಕೇಂದ್ರ ಬಜೆಟ್ ಅಧಿವೇಶನದಲ್ಲಿ ಹಣಕಾಸು ಮಸೂದೆಗೆ ಅನುಮೋದನೆ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com