ವಾರ್ಷಿಕ ಅಮರನಾಥ ಯಾತ್ರೆ: ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಹೊರಟ ಯಾತ್ರಿಕರ ಮೊದಲ ತಂಡ

ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲ ಅಮರನಾಥಕ್ಕೆ ಯಾತ್ರಿಕರ(Amarnath Yatra 2023) ವಾರ್ಷಿಕ ಯಾತ್ರೆಯು ಇಂದು ಜುಲೈ 1ರಂದು ಬಾಲ್ಟಾಲ್‌ನ ಮೂಲ ಶಿಬಿರದಿಂದ(Base camp) ಆರಂಭವಾಗಿದೆ.
ಯಾತ್ರಿಕರ ತಂಡ
ಯಾತ್ರಿಕರ ತಂಡ
Updated on

ಜಮ್ಮು-ಕಾಶ್ಮೀರ: ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲ ಅಮರನಾಥಕ್ಕೆ ಯಾತ್ರಿಕರ(Amarnath Yatra 2023) ವಾರ್ಷಿಕ ಯಾತ್ರೆಯು ಇಂದು ಜುಲೈ 1ರಂದು ಬಾಲ್ಟಾಲ್‌ನ ಮೂಲ ಶಿಬಿರದಿಂದ(Base camp) ಆರಂಭವಾಗಿದೆ.

ಯಾತ್ರಿಕರ ಮೊದಲ ತಂಡ ಬಟ್ಲಾಲ್ ಗಂಡೆರ್ಬಾಲ್ ಮೂಲ ಶಿಬಿರದಿಂದ ಹೊರಟಿದ್ದಾರೆ. 62 ದಿನಗಳ ಯಾತ್ರೆಗೆ ಗಂದರ್ ಬಾಲ್ ಜಿಲ್ಲಾಧಿಕಾರಿ ಶ್ಯಾಂಬಿರ್ ಅಮರನಾಥ ಪುಣ್ಯಕ್ಷೇತ್ರ ಮಂಡಳಿಯ ಹಿರಿಯ ಅಧಿಕಾರಿಗಳು ಮತ್ತು ಪೋಲೀಸ್ ರ ಸಮ್ಮುಖದಲ್ಲಿ ಇಂದು ಬಾಲ್ಟಾಲ್ ಬೇಸ್ ಕ್ಯಾಂಪ್‌ನಲ್ಲಿ ಚಾಲನೆ ನೀಡಿದರು.

ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿರುವ ಬಾಲ್ಟಾಲ್ ವಾರ್ಷಿಕ ಅಮರನಾಥ ತೀರ್ಥಯಾತ್ರೆಯ ಅವಳಿ ಮಾರ್ಗಗಳಲ್ಲಿ ಒಂದಾಗಿದೆ. ಇನ್ನೊಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಮಾರ್ಗವಾಗಿದೆ. ಯಾತ್ರಿಕರು ಬೇಸ್ ಕ್ಯಾಂಪ್‌ನಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ಪವಿತ್ರ ಗುಹಾ ದೇಗುಲಕ್ಕೆ 12 ಕಿಮೀ ಪ್ರಯಾಣವನ್ನು ಕೈಗೊಳ್ಳುತ್ತಾರೆ.

ಭದ್ರತೆ ಸೇರಿದಂತೆ ವಾರ್ಷಿಕ ಯಾತ್ರೆಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 6,000 ಯಾತ್ರಿಕರು ಬೇಸ್ ಕ್ಯಾಂಪ್‌ಗೆ ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ಯಾಂಬೀರ್ ತಿಳಿಸಿದ್ದಾರೆ. ಯಾತ್ರೆಯು ಸುಗಮವಾಗಿ ನಡೆಯಲಿ ಎಂದು ನಾನು ಬಯಸುತ್ತೇನೆ. ಯಾತ್ರಿಕರಿಗೆ ಆರ್ ಎಫ್ಐಡಿ ಕಾರ್ಡ್‌ಗಳನ್ನು ಕೊಂಡೊಯ್ಯುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಟ್ರ್ಯಾಕ್ ಉದ್ದಕ್ಕೂ ಸ್ವಯಂಸೇವಕರು ಮತ್ತು ಪರ್ವತ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಯಾತ್ರಿಗಳು ಅಗತ್ಯವಿದ್ದರೆ ಅವರ ಸಹಾಯವನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸ್ಥಳೀಯ ಜನರ ಸಹಕಾರವನ್ನು ಕೂಡ ಕೋರಲಾಗಿದೆ. 
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನಿನ್ನೆ ಶುಕ್ರವಾರ ಜಮ್ಮು ಮೂಲ ಶಿಬಿರದಿಂದ 3,488 ಯಾತ್ರಾರ್ಥಿಗಳ ಮೊದಲ ತಂಡಕ್ಕೆ ಚಾಲನೆ ನೀಡಿದರು.

ಇಲ್ಲಿಯವರೆಗೆ ಮೂರು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಯಾತ್ರೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೊಸ ಭದ್ರತಾ ಪಿಕೆಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯಾತ್ರೆಯು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ.

ಜಮ್ಮು ಶಿಬಿರದಿಂದ ಯಾತ್ರಿಕರ ಎರಡನೇ ತಂಡ ಪ್ರಯಾಣ: 4,400 ಕ್ಕೂ ಹೆಚ್ಚು ಯಾತ್ರಾರ್ಥಿಗಳ ಎರಡನೇ ಬ್ಯಾಚ್ ಇಂದು ಭಗವತಿ ನಗರದ ಬೇಸ್ ಕ್ಯಾಂಪ್‌ನಿಂದ 3,888 ಮೀಟರ್ ಎತ್ತರದ ಅಮರನಾಥ ಗುಹಾ ದೇಗುಲಕ್ಕೆ ತೀರ್ಥಯಾತ್ರೆಯಲ್ಲಿ ಸುರಕ್ಷಿತ ಬೆಂಗಾವಲು ಪಡೆಯಲ್ಲಿ ಹೊರಟಿತು. 188 ವಾಹನಗಳ ಅಶ್ವದಳದಲ್ಲಿ ಯಾತ್ರಾರ್ಥಿಗಳು ಬೆಳಗ್ಗೆ ಮೂಲ ಶಿಬಿರದಿಂದ ಹೊರಟರು. ಇದರೊಂದಿಗೆ ಜಮ್ಮು ಮೂಲ ಶಿಬಿರದಿಂದ ಅಮರನಾಥ ಗುಹೆ ದೇಗುಲಕ್ಕೆ ತೆರಳಿರುವ ಯಾತ್ರಾರ್ಥಿಗಳ ಒಟ್ಟು ಸಂಖ್ಯೆ 7,904ಕ್ಕೆ ಏರಿಕೆಯಾಗಿದೆ.

62-ದಿನಗಳ ಸುದೀರ್ಘ ತೀರ್ಥಯಾತ್ರೆ ಕಾಶ್ಮೀರದಿಂದ ಅನಂತನಾಗ್ ಜಿಲ್ಲೆಯ 48-ಕಿಮೀ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದರ್‌ಬಾಲ್ ಜಿಲ್ಲೆಯ ಚಿಕ್ಕದಾದ ಕಡಿದಾದ 14-ಕಿಮೀ-ಉದ್ದದ ಬಾಲ್ಟಾಲ್ ಮಾರ್ಗದಲ್ಲಿ ಸಾಗಲಿದೆ.

ವಾರ್ಷಿಕ ತೀರ್ಥಯಾತ್ರೆಗಾಗಿ ಭಗವತಿ ನಗರ ಮೂಲ ಶಿಬಿರ ಮತ್ತು ಸುತ್ತಮುತ್ತ ಬಹು ಹಂತದ ಭದ್ರತಾ ಸೆಟಪ್ ನ್ನು ಚಾಲನೆ ಮಾಡಲಾಗಿದೆ. ಜಮ್ಮುವಿನಾದ್ಯಂತ 33 ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯಾತ್ರಾರ್ಥಿಗಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಟ್ಯಾಗ್‌ಗಳನ್ನು ನೀಡಲಾಗುತ್ತಿದೆ. ಯಾತ್ರೆ ಕೈಗೊಳ್ಳಲು ಉದ್ದೇಶಿಸಿರುವ ಯಾತ್ರಾರ್ಥಿಗಳ ನೋಂದಣಿಗಾಗಿ ಐದು ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.

ಈ ವರ್ಷ ಇದುವರೆಗೆ 3.5 ಲಕ್ಷಕ್ಕೂ ಹೆಚ್ಚು ಜನರು ಯಾತ್ರೆಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com