ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಪಂಚಾಯತ್ ಚುನಾವಣೆ ಮತದಾನ ವೇಳೆ ಸಂಭವಿಸಿದ ವ್ಯಾಪಕ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸುವೆಂದು ಅಧಿಕಾರಿ, ರಾಜ್ಯದಲ್ಲಿ ಪ್ರಜಾಪ್ರಭುತ್ವ ನಾಶವಾಗಿದ್ದು, ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿಯೇ ಹೊಣೆ ಎಂದು ಆರೋಪಿಸಿದ್ದಾರೆ.
ಹಿಂಸಾಚಾರ ಸಂಭವಿಸಿದ ಸ್ಥಳಗಳಲ್ಲಿ ಸಿಸಿಟಿವಿ ಪರಿಶೀಲಿಸುವಂತೆ ಹಾಗೂ ಮರು ಮತದಾನ ನಡೆಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಿಎಂ ಮಮತಾ ಬ್ಯಾನರ್ಜಿಯೇ ಹೊಣೆ. ಬೂತ್ಗಳಲ್ಲಿ ಸಿಆರ್ಪಿಎಫ್ ಅನ್ನು ಏಕೆ ನಿಯೋಜಿಸಿಲ್ಲ? ಎಂದು ಪ್ರಶ್ನಿಸಿದ ಅವರು, ಹಿಂಸಾಚಾರದಲ್ಲಿ ಮೃತರ ಕುಟುಂಬ ಸದಸ್ಯರೊಂದಿಗೆ ನ್ಯಾಯಾಲಯಕ್ಕೆ ಹೋಗುತ್ತೇವೆ ಮತ್ತು ಘಟನೆಯ ಬಗ್ಗೆ ವಿವರವಾದ ತನಿಖೆಗೆ ಒತ್ತಾಯಿಸುತ್ತೇವೆ ಎಂದರು.
"ಬಂಗಾಳಕ್ಕೆ ಸಾಕಷ್ಟು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಬಂದಿವೆ. ಹೆಚ್ಚಿನ ಸಾವುಗಳು ಬುಲೆಟ್ ಗಾಯಗಳಿಂದಾಗಿವೆ, ಈ ಶಸ್ತ್ರಾಸ್ತ್ರಗಳನ್ನು ಇಲ್ಲಿಗೆ ಯಾರು ಕಳುಹಿಸಿದ್ದಾರೆ ಮತ್ತು ಯಾರು ಹಣ ನೀಡಿದ್ದಾರೆ, ಆದ್ದರಿಂದ ಈ ಬಗ್ಗೆ ಎನ್ ಐಎ ಮತ್ತು ಸಿಬಿಐ ತನಿಖೆಯಾಗಬೇಕು. ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಸೆಕ್ಷನ್ 144 ವಿಧಿಸಬೇಕು ಮತ್ತು ಎಲ್ಲಾ ಬೂತ್ಗಳಲ್ಲಿ ಸಿಎಪಿಎಫ್ ನಿಯೋಜಿಸಬೇಕು. ಮೃತರಿಗೆ 50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸೂಕ್ಷ್ಮ ಬೂತ್ಗಳಿಗೆ ಸಂಬಂಧಿಸಿದ ಮಾಹಿತಿ ಗೊತ್ತಿದ್ದರೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ, ಎಂದು ಬಿಎಸ್ಎಫ್ ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದೆ. ಇದಲ್ಲದೆ, ರಾಜ್ಯ ಪೊಲೀಸರನ್ನು ನಿಯೋಜಿಸಿದ ಸ್ಥಳಗಳಲ್ಲಿ ಭಾರಿ ಹಿಂಸಾಚಾರದ ಘಟನೆ ನಡೆದಿದೆ. ಸೂಕ್ಷ್ಮ ಪ್ರದೇಶಗಳ ಸರಿಯಾದ ಪಟ್ಟಿ ನೀಡಿದ್ದರೆ ಕೇಂದ್ರ ಪಡೆಗಳ ನಿಯೋಜನೆ ಸುಲಭವಾಗುತ್ತಿತ್ತು ಎಂದು ಬಿಎಸ್ ಎಫ್ ಹೇಳಿದೆ.
Advertisement