ಜಮ್ಮು ಮತ್ತು ಕಾಶ್ಮೀರ: ಅಮರನಾಥ್ ಯಾತ್ರೆ ತಾತ್ಕಾಲಿಕ ಸ್ಥಗಿತ, ಪೋಶನಾ ನದಿಯಲ್ಲಿ ಕೊಚ್ಚಿಹೋದ ಇಬ್ಬರು ಸೈನಿಕರು

ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಭಾರಿ ಮಳೆ ಮತ್ತು ಪ್ರತೀಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಕರ್ತವ್ಯ ನಿರ್ವಹಣೆ ವೇಳೆ ಪೋಶನಾ ನದಿಯಲ್ಲಿ ಕೊಚ್ಚಿ ಹೋಗಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ
Updated on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಭಾರಿ ಮಳೆ ಮತ್ತು ಪ್ರತೀಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಕರ್ತವ್ಯ ನಿರ್ವಹಣೆ ವೇಳೆ ಪೋಶನಾ ನದಿಯಲ್ಲಿ ಕೊಚ್ಚಿ ಹೋಗಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ.

ಪೂಂಛ್ ಜಿಲ್ಲೆಯ ಪೋಶನಾ ನದಿಯಲ್ಲಿ ಇಬ್ಬರು ಸೈನಿಕರು ನೀರು ಪಾಲಾಗಿದ್ದು, ಮೃತರ ಪೈಕಿ ಭಾರತೀಯ ಸೇನೆಯ ನಾಯಬ್ ಸುಬೇದಾರ್ ಕುಲದೀಪ್ ಸಿಂಗ್ ಅವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ನದಿಯನ್ನು ದಾಟುವ ವೇಳೆ ಹಠಾತ್ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ.

ಜಮ್ಮುವಿನ ರಕ್ಷಣಾ ಇಲಾಖೆಯ PRO ಪ್ರಕಾರ, ಇಬ್ಬರು ಸೇನಾ ಯೋಧರು ಪೂಂಚ್‌ನ ಪೋಷನಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಭಾರತೀಯ ಸೇನೆಯ ಇಬ್ಬರು ಯೋಧರನ್ನು ಪತ್ತೆ ಹಚ್ಚಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಇಬ್ಬರೂ ಸೈನಿಕರು ಸುರನಕೋಟೆ ಪ್ರದೇಶದ ಪೋಷಣದಲ್ಲಿ ಡೋಗ್ರಾ ನಾಲಾವನ್ನು ದಾಟುತ್ತಿದ್ದಾಗ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಅವರು ಕೊಚ್ಚಿಹೋಗಿದ್ದಾರೆ. ಸೇನೆ, ಪೊಲೀಸ್ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಪ್ರವಾಹದಲ್ಲಿ ಕೊಚ್ಚಿಹೋದ ಯೋಧರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರೆಸಿದೆ. ಆದರೆ, ಇಬ್ಬರು ಯೋಧರು ಇನ್ನೂ ಪತ್ತೆಯಾಗಿಲ್ಲ. ಗುರುವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಕ್ಕಿ ಹರಿಯುತ್ತಿರುವ ಎಲ್ಲಾ ನದಿಗಳು ಮತ್ತು ಚರಂಡಿಗಳಿಂದ ದೂರ ಇರುವಂತೆ ಜಿಲ್ಲೆಯ ವಿವಿಧ ಭಾಗಗಳ ಜನರಿಗೆ ಪೊಲೀಸರು ಸೂಚಿಸಿದ್ದಾರೆ.

ಅಮರನಾಥ್ ಯಾತ್ರೆ ತಾತ್ಕಾಲಿಕ ಸ್ಥಗಿತ
ಇನ್ನು ಹಿಂದೂಗಳ ಪವಿತ್ರ ಅಮರನಾಥ್ ಯಾತ್ರೆ ಕೂಡ ಭಾರಿ ಮಳೆ- ಪ್ರವಾಹ ಮತ್ತು ಪ್ರತೀಕೂಲ ಹವಾಮಾನದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಣಾಮ ಅಮರನಾಥ್ ಯಾತ್ರೆಯ ಬೇಸ್ ಕ್ಯಾಂಪ್ ಗಳಲ್ಲೇ ಯಾತ್ರಾರ್ಥಿಗಳು ಉಳಿಯುವಂತೆ ಸೂಚಿಸಲಾಗಿದೆ. ಅಮರನಾಥ ಯಾತ್ರೆಯು ಜುಲೈ 1 ರಿಂದ ಪ್ರಾರಂಭವಾಗಿದ್ದು,ಆಗಸ್ಟ್ 31, 2023 ರಂದು ಮುಕ್ತಾಯಗೊಳ್ಳಲಿದೆ.

ಭಾರಿ ಮಳೆಯಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು ಪರಿಣಾಮ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಪರಿಣಾಮ ಸರಕು ಸಾಗಣೆ ಟ್ರಕ್‌ಗಳು ಉಧಮ್‌ಪುರದ ಹೆದ್ದಾರಿಯಲ್ಲಿ ಕಿಮೀ ಗಟ್ಟಲೇ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com