ಮಣಿಪುರ ಪರಿಸ್ಥಿತಿ ಕುರಿತ ಪ್ರಧಾನಿ ಹೇಳಿಕೆಗೆ ವಿಪಕ್ಷಗಳಿಂದ ಮುಂದುವರೆದ ಪ್ರತಿಭಟನೆ: ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

ಇಂದು ಕೂಡಾ ಲೋಕಸಭೆಯಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸಿ, ಗದ್ದಲ ಉಂಟುಮಾಡಿದವು. ಇದರಿಂದಾಗಿ  ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. 
ಸಂಸತ್
ಸಂಸತ್

ನವದೆಹಲಿ: ಮಣಿಪುರ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಕಳೆದ 9 ದಿನಗಳಿಂದರೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಆದರೆ, ಇಲ್ಲಿವರೆಗೂ ಪ್ರಧಾನಿ ಮಾತ್ರ ಮಾತನಾಡಿಲ್ಲ. ಹೀಗಾಗಿ ಇಂದು ಕೂಡಾ ಲೋಕಸಭೆಯಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸಿ, ಗದ್ದಲ ಉಂಟುಮಾಡಿದವು. ಇದರಿಂದಾಗಿ  ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. 

ಸದನ ಬೆಳಿಗ್ಗೆ 11 ಗಂಟೆಗೆ ಸಮಾವೇಶಗೊಳ್ಳುತ್ತಿದ್ದಂತೆಯೇ, ಮಲಾವಿಯದ ಸಂಸದೀಯ ನಿಯೋಗವು ಭಾರತಕ್ಕೆ ಭೇಟಿ ನೀಡುತ್ತಿದ್ದು, ಸದನದ ಕಲಾಪಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು. ವಿದೇಶಿ ನಿಯೋಗವನ್ನು ಅವರ ಸ್ವಾಗತಿಸಿ ದೇಶದಲ್ಲಿ ಅವರ ಸುಖಕರ ವಾಸ್ತವ್ಯಕ್ಕೆ ಶುಭ ಹಾರೈಸಿದರು. ಸ್ಪೀಕರ್ ತಮ್ಮ ಭಾಷಣ ಪೂರ್ಣಗೊಳಿಸುತ್ತಿದ್ದಂತೆ, ವಿರೋಧ ಪಕ್ಷದ ಸದಸ್ಯರು ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿಯವರಿಂದ ಹೇಳಿಕೆಗೆ ಒತ್ತಾಯಿಸಿದರು. ಕೂಡಲೇ ಸದನದ ಬಾವಿಗೆ ಆಗಮಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಆರಂಭದಲ್ಲಿ ವಿಪಕ್ಷ ಸದಸ್ಯರ ಪ್ರತಿಭಟನೆಯನ್ನು ನಿರ್ಲಕ್ಷಿಸಿದ ಸ್ಪೀಕರ್ ನಿಗದಿಯಂತೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಘೋಷಣೆಗಳು ಮತ್ತು ಪ್ರತಿಭಟನೆ ನಡುವೆ ಶಿಕ್ಷಣ ಮತ್ತು ಹಣಕಾಸು ಸಚಿವಾಲಯಗಳಿಗೆ ಸಂಬಂಧಿಸಿದ ಎರಡು ಪ್ರಶ್ನೆಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು. ಪ್ರತಿಭಟನೆ ಮುಂದುವರಿದಾಗ ಪ್ರತಿಪಕ್ಷದ ಸದಸ್ಯರು ತಮ್ಮ ಸ್ಥಾನಗಳಿಗೆ ತೆರಳಿ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಸ್ಪೀಕರ್ ಮನವಿ ಮಾಡಿದರು. ಅವರ ಮನವಿಯನ್ನು ಪ್ರತಿಪಕ್ಷಗಳು ನಿರ್ಲಕ್ಷಿಸಿದ್ದರಿಂದ, ಸುಮಾರು 15 ನಿಮಿಷಗಳ ಕಲಾಪದ ನಂತರ ಸ್ಪೀಕರ್ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಜುಲೈ 20 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಮಣಿಪುರ ಹಿಂಸಾಚಾರವು ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪವನ್ನು ಬಲಿಪಡೆದಿದೆ.  ಪ್ರತಿಪಕ್ಷಗಳು ಪ್ರಧಾನಿ ಮೋದಿಯವರ ಹೇಳಿಕೆ ಮತ್ತು ಈಶಾನ್ಯ ರಾಜ್ಯದ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಒತ್ತಾಯಿಸಿದವು. ರಾಜ್ಯಸಭೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಮಣಿಪುರ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಸದನದ ನಾಯಕ ಫಿಯೂಷ್ ಗೋಯೆಲ್ ಅವರು ಸಭಾಪತಿ ಬಳಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com