ಭುವನೇಶ್ವರ: ಒಡಿಶಾದ ಬಾಲಸೋರ್ನಲ್ಲಿ ಭೀಕರ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನಿಂದ ವಶಪಡಿಸಿಕೊಂಡ ಸುಮಾರು 40 ಮೃತದೇಹಗಳಿಗೆ ಯಾವುದೇ ಗಾಯಗಳಾಗಿಲ್ಲ. ಹೀಗಾಗಿ ಈ 40 ಪ್ರಯಾಣಿಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ ಎಂದು ಜಿಆರ್ಪಿ ತಿಳಿಸಿದೆ.
ಬಾಲಸೋರ್ನ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ನಲ್ಲಿ, ಅಪಘಾತ ಸಂಭವಿಸಿದಾಗ ಲೈವ್ ಓವರ್ಹೆಡ್ ವೈರ್ಗಳು ತುಂಡಾಗಿ, ಕೆಲವು ಬೋಗಿಗಳಿಗೆ ಸಿಕ್ಕಿಹಾಕಿಕೊಂಡಿದೆ. ಈ ಬೋಗಿಗಳಲ್ಲಿದ್ದ ಪ್ರಯಾಣಿಕರಿಗೆ ವಿದ್ಯುತ್ ತಗುಲಿದೆ ಎಂದು ಉಲ್ಲೇಖಿಸಲಾಗಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪಿ ಕುಮಾರ್ ನಾಯಕ್ ತಮ್ಮ ಎಫ್ಐಆರ್ನಲ್ಲಿ, "ಓವರ್ಹೆಡ್ ಎಲ್ಟಿ (ಲೋ ಟೆನ್ಷನ್) ಲೈನ್ ತುಂಡಾಗಿ ಉಂಟಾದ ಗಾಯಗಳಿಂದ ಅನೇಕ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಹೌರಾ-ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್, ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ಮತ್ತು ಸ್ಟೇಷನರಿ ಗೂಡ್ಸ್ ರೈಲು ಒಳಗೊಂಡ ತ್ರಿವಳಿ ರೈಲು ಅಪಘಾತದಲ್ಲಿ 278 ಜನ ಮೃತಪಟ್ಟಿದ್ದಾರೆ ಮತ್ತು 1200 ಮಂದಿ ಗಾಯಗೊಂಡಿದ್ದಾರೆ.
Advertisement