ನವದೆಹಲಿ: ಬ್ರಿಟಿಷರು ಅಧಿಕಾರ ಹಸ್ತಾಂತರದ ಸಂಕೇತವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ 'ಸೆಂಗೋಲ್' ಅನ್ನು ನೀಡಿದ್ದರು ಎಂದು ಹೇಳಿದ್ದ ಬಿಜೆಪಿಯ 'ನಕಲಿ ಕಾರ್ಖಾನೆ' ಬಣ್ಣ ಈಗ ಬಯಲಾಗಿದೆ ಎಂದು ತಮಿಳುನಾಡು ಮೂಲದ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರ ಸಂದರ್ಶನ ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಶುಕ್ರವಾರ ತಿರುಗೇಟು ನೀಡಿದ್ದಾರೆ.
ತಿರುವವಾಡುತುರೈ ಅಧೀನಂನ ಮುಖ್ಯಸ್ಥ ಸ್ವಾಮಿಗಲ್ ಅವರು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನೆಹರೂಗೆ 'ಸೆಂಗೋಲ್' ಅನ್ನು ಹಸ್ತಾಂತರಿಸುವಾಗ ಲಾರ್ಡ್ ಮೌಂಟ್ ಬ್ಯಾಟನ್ ಅಥವಾ ಸಿ ರಾಜಗೋಪಾಲಾಚಾರಿ ಅವರು ಇರಲಿಲ್ಲ. ರಾಜದಂಡವನ್ನು ವಿಧ್ಯುಕ್ತವಾಗಿ ಆಗಸ್ಟ್ 14, 1947 ರಂದು ರಾತ್ರಿ 10 ಗಂಟೆಗೆ ನೆಹರೂ ಅವರ ನಿವಾಸದಲ್ಲಿ ನೀಡಲಾಯಿತು ಎಂದು ಹೇಳಿದ್ದಾರೆ.
ಮೇ 28 ರಂದು ಉದ್ಘಾಟನೆಯಾದ ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಲಾಗಿದ್ದು, ಸ್ಥಾಪನೆಗೆ ಮುನ್ನ ಕಾಂಗ್ರೆಸ್, ಪವಿತ್ರವಾದ ಸೆಂಗೋಲ್ ಅನ್ನು ನೆಹರೂಗೆ ಉಡುಗೊರೆಯಾಗಿ ನೀಡಿದ ಒಂದು ಚಿನ್ನದ ಕೋಲು ಎಂದು ಕರೆಯುವ ಮೂಲಕ ಹಿಂದೂ ಸಂಪ್ರದಾಯಗಳಿಗೆ ಅವಮಾನ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು.
"ಬಿಜೆಪಿಯ 'ನಕಲಿ ಫ್ಯಾಕ್ಟರಿಯ' ಬಣ್ಣ ಇಂದು ಬಯಲಾಗಿದೆ. ಸ್ವತಃ ತಿರುವವಡುತುರೈ ಅಧೀನಂನ ಮುಖ್ಯಸ್ಥ ಸ್ವಾಮಿಗಳು ದಿ ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಮೌಂಟ್ಬ್ಯಾಟನ್ ಇರಲಿಲ್ಲ, ರಾಜಾಜಿಯೂ ಇರಲಿಲ್ಲ ಮತ್ತು ಈ ಸಂಗೋಲ್ ಯಾವುದೇ ಅಧಿಕಾರ ಹಸ್ತಾಂತರದ ಭಾಗವಾಗಿಲ್ಲ. ಆದರೆ ಭವ್ಯವಾದ 'ಸೆಂಗೋಲ್' ಅನ್ನು ನಿಜವಾಗಿಯೂ ನೆಹರೂಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ನಾನು ಎಲ್ಲಾ ಸಮಯದಲ್ಲೂ ಹೇಳುತ್ತಿದ್ದೇನೆ" ಎಂದು ಸ್ವಾಮಿಜಿಗಳು ತಿಳಿಸಿರುವುದಾಗಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
Advertisement