ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಲು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ ಎಂಬ ವರದಿಯ ನಡುವೆ, ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಅವರು, ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ರಾಜ್ಯ ರಾಜಧಾನಿಗೆ ಆಗಮಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಜೂನ್ 23 ರಂದು ಪಾಟ್ನಾದಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಸಭೆಯ ಕಾರ್ಯತಂತ್ರದ ಕುರಿತು ಚರ್ಚಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೂನ್ 20ರಂದು ತಮಿಳುನಾಡಿಗೆ ತೆರಳಲಿದ್ದಾರೆ. ಅವರು ತಮ್ಮ ಪ್ರವಾಸವನ್ನು ಮುಗಿಸಿ ಜೂನ್ 21 ರಂದು ಪಾಟ್ನಾಗೆ ಹಿಂತಿರುಗಲಿದ್ದಾರೆ ಎಂದು ಜೆಡಿ (ಯು) ಮೂಲಗಳು ತಿಳಿಸಿವೆ.
ನಿತೀಶ್ ಕುಮಾರ್ ಅವರನ್ನು ಸ್ಟಾಲಿನ್ ಅವರು ತಮಿಳುನಾಡಿಗೆ ಆಹ್ವಾನಿಸಿದ ಬೆನ್ನಲ್ಲೇ ನಿತೀಶ್ಗೆ ಆಪ್ತರಾಗಿರುವ ಜೆಡಿಯು ಮುಖಂಡರೊಬ್ಬರು ಉಭಯ ನಾಯಕರ ನಡುವೆ ಸಭೆ ನಿಗದಿಯಾಗಿರುವ ಕುರಿತು ಸ್ಪಷ್ಟಪಡಿಸಿದ್ದಾರೆ. 'ವಿರೋಧ ಪಕ್ಷಗಳ ಸಭೆಗೆ ಮುಂಚಿತವಾಗಿ ಉಭಯ ನಾಯಕರು ಭೇಟಿ ಮಾಡುವ ಹಿಂದಿನ ಕಾರಣ ಸ್ಪಷ್ಟವಾಗಿದೆ'. ಜೂನ್ 23ರ ಸಭೆಯು ಐತಿಹಾಸಿಕ ಸಭೆಯಾಗಿದೆ ಎಂದು ಅವರು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಜೊತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಸಿಂಗ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈ ಹಿಂದೆ, ಜೆಡಿಯು ರಾಷ್ಟ್ರೀಯ ಮುಖ್ಯಸ್ಥ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಮತ್ತು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಮಾವೇಶದಲ್ಲಿ ಖರ್ಗೆ ಮತ್ತು ರಾಹುಲ್ ಇಬ್ಬರೂ ಭಾಗವಹಿಸುವ ಬಗ್ಗೆ ಘೋಷಿಸಿದ್ದರು.
ರಾಜ್ಯ ರಾಜಧಾನಿಗೆ ಬಂದಿಳಿದ ಕೂಡಲೇ ಹಿರಿಯ ಕಾಂಗ್ರೆಸ್ ನಾಯಕರು ನೇರವಾಗಿ ರಾಜ್ಯ ಕಾಂಗ್ರೆಸ್ ಪ್ರಧಾನ ಕಚೇರಿ ಸದಾಕತ್ ಆಶ್ರಮಕ್ಕೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದ ಕಾರಣ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಹಾಜರಾಗಲು ಸಾಧ್ಯವಿಲ್ಲದ ಕಾರಣ ಈ ಹಿಂದೆ ಜೂನ್ 12 ರಂದು ನಡೆಯಬೇಕಿದ್ದ ವಿರೋಧ ಪಕ್ಷದ ನಾಯಕರ ಸಭೆಯನ್ನು ಜೂನ್ 23 ಕ್ಕೆ ಮುಂದೂಡಲಾಯಿತು.
Advertisement