
ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೊಳಿಸುವ ಬಗ್ಗೆ ಒಲವು ತೋರಿದ ಬೆನ್ನಲ್ಲೇ, ತುರ್ತು ಸಭೆ ನಡೆಸಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ), ಯುಸಿಸಿ ವಿರೋಧಿಸಲು ನಿರ್ಧರಿಸಿದೆ.
ಎಐಎಂಪಿಎಲ್ಬಿ ಅಧ್ಯಕ್ಷ ಸೈಫುಲ್ಲಾ ರೆಹಮಾನಿ, ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಎಐಎಂಪಿಎಲ್ಬಿ ಸದಸ್ಯ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ, ಎಐಎಂಪಿಎಲ್ಬಿ ವಕೀಲರು ಮತ್ತು ಇತರರು ಮಂಗಳವಾರ ತಡರಾತ್ರಿ ವರ್ಚುವಲ್ ಸಭೆ ನಡೆಸಿದ್ದು, ಮಂಡಳಿಯು ತನ್ನ ಅಭಿಪ್ರಾಯಗಳನ್ನು ಕಾನೂನು ಆಯೋಗದ ಮುಂದೆ ಬಲವಾಗಿ ಮಂಡಿಸಲು ನಿರ್ಧರಿಸಿದೆ.
ಯುಸಿಸಿ ಕುರಿತು ಪ್ರಧಾನಿ ಮೋದಿ ಅವರ ಹೇಳಿಕೆಗ ಪ್ರತಿಕ್ರಿಯಿಸಿದ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ, “ಎಐಎಂಪಿಎಲ್ಬಿ ಏಕರೂಪ ನಾಗರಿಕ ಸಂಹಿತೆಯನ್ನು ತೀವ್ರವಾಗಿ ವಿರೋಧಿಸುತ್ತದೆ. ಕಾನೂನು ಆಯೋಗದ ಮುಂದೆ ನಮ್ಮ ಅಭಿಪ್ರಾಯವನ್ನು ಹೆಚ್ಚು ಶಕ್ತಿಯುತವಾಗಿ ಮಂಡಿಸುವ ಮೂಲಕ ಸರ್ಕಾರದ ಉದ್ದೇಶಿತ ನಡೆಯನ್ನು ಎದುರಿಸಲು ನಾವು ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದಿದ್ದಾರೆ.
ಮಂಗಳವಾರ ನಡೆದ ಆನ್ಲೈನ್ ಸಭೆಯಲ್ಲಿ ದೇಶದ ಎಲ್ಲಾ ಪ್ರಮುಖ ಮುಸ್ಲಿಂ ನಾಯಕರು ಉಪಸ್ಥಿತರಿದ್ದರು.
ನಿನ್ನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಯುಸಿಸಿ ಜಾರಿಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದರು. ಸಂವಿಧಾನವು ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದು ಹೇಳಿದ್ದರು.
Advertisement