ಆಂಧ್ರ ಸಿಎಂ ಬಾವಿಯಲ್ಲಿರುವ 'ಪ್ರಾದೇಶಿಕ ಮನಸ್ಸಿನ ಕಪ್ಪೆ': ವೈ ಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಅದ್ನಾನ್ ಸಾಮಿ ವ್ಯಂಗ್ಯ
ಮುಂಬಯಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರವು ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್ ಗೆಲ್ಲುತ್ತಿದ್ದಂತೆ, ಶುಭಾಶಯಗಳ ಸುರಿಮಳೆ ಸುರಿದಿದೆ. ಅದರಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ತೆಲುಗು ಧ್ವಜ ಎತ್ತರದಲ್ಲಿ ಹಾರಾಡುತ್ತಿದೆ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಮೂಲತಃ ಪಾಕಿಸ್ತಾನದವರಾದ ಮತ್ತು ಈಗ ಭಾರತೀಯ ಪ್ರಜೆಯಾಗಿರುವ ಗಾಯಕ ಅದ್ನಾನ್ ಸಾಮಿ ಕೊಂಕು ತೆಗೆದಿದ್ದಾರೆ. ಅಲ್ಲದೇ, ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಬಾವಿಯೊಳಗಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆ ಎಂದು ಜರಿದಿದ್ದಾರೆ.
ನಾಟು ನಾಟು ಹಾಡಿಗೆ ಆಸ್ಕರ್ ಗೆದ್ದ ಆರ್ಆರ್ಆರ್ ತಂಡಕ್ಕೆ ಆಂಧ್ರ ಸಿಎಂ ವೈ ಎಸ್ ಜಗನ್ಮೋಹನ್ ರೆಡ್ಡಿ ಶುಭಾಶಯ ಕೋರಿದ್ದರು. ಟ್ವೀಟ್ ಮಾಡಿ, ತೆಲುಗು ಬಾವುಟ ಎತ್ತರಕ್ಕೆ ಹಾರುತ್ತಿದೆ! ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ತಕ್ಕ ಮನ್ನಣೆಯನ್ನು ನೀಡುತ್ತಿರುವ ನಮ್ಮ ಜಾನಪದ ಪರಂಪರೆಯನ್ನು ತುಂಬಾ ಸುಂದರವಾಗಿ ಆಚರಿಸುವ ತೆಲುಗು ಹಾಡಿನ ಬಗ್ಗೆ ನನಗೆ ಹೆಮ್ಮೆಯಿದೆ. ಅವರು ನಿಜವಾಗಿಯೂ ಶ್ರೇಷ್ಠತೆಯನ್ನು ಮರು ವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದ್ದರು.
ತೆಲುಗು ಬಾವುಟ ಎತ್ತರದಲ್ಲಿ ಹಾರಾಟ ನಡೆಸುತ್ತಿದೆ ಎಂದು ಟ್ವೀಟ್ ಮಾಡಿದ್ದಕ್ಕೆ ಕೊಂಕು ತೆಗೆದಿರುವ ಮೂಲತಃ ಪಾಕಿಸ್ತಾನದವರಾದ ಹಾಗೂ ಈಗ ಭಾರತೀಯ ಪ್ರಜೆಯಾಗಿರುವ ಅದ್ನಾನ್ ಸಾಮಿ, ಆಂಧ್ರ ಸಿಎಂ ಟ್ವೀಟ್ ಪ್ರಾದೇಶಿಕ ವಿಭಜನೆಯನ್ನು ಸೃಷ್ಟಿಸುತ್ತಿದೆ.
ಅವರಿಗೆ ರಾಷ್ಟ್ರೀಯ ಹೆಮ್ಮೆಯನ್ನು ಅಳವಡಿಸಿಕೊಳ್ಳಲು ಅಥವಾ ಬೋಧಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದರು. ಬಾವಿಯಲ್ಲಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆ ಸಮುದ್ರದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಪ್ರಾದೇಶಿಕ ವಿಭಜನೆಗಳನ್ನು ಸೃಷ್ಟಿಸಿದ್ದಕ್ಕಾಗಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಸ್ವೀಕರಿಸಲು ಅಥವಾ ಬೋಧಿಸಲು ಸಾಧ್ಯವಾಗದಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು ಎಂದು ಅದ್ನಾನ್ ಸಾಮಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ