ಚೆನ್ನೈ: ಆಸ್ಕರ್ ಪ್ರಶಸ್ತಿ ಗೆದ್ದ ಡಾಕ್ಯುಮೆಂಟರಿ ಸಿನಿಮಾ ದಿ ಎಲಿಫೆಂಟ್ ವಿಸ್ಪರರ್ಸ್ ನಲ್ಲಿ ರಘು ಎಂಬ ಆನೆಮರಿಯ ಪಾಲಕರಾಗಿದ್ದ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಗೆ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಸನ್ಮಾನ ಮಾಡಿ ಗೌರವ ಸಲ್ಲಿಸಿದ್ದಾರೆ.
ಆನೆ ಆರೈಕೆ ನಿರ್ವಹಣೆಯಲ್ಲಿ ತಮಿಳುನಾಡಿನ ಅರಣ್ಯ ಇಲಾಖೆಯ ಚಟುವಟಿಕೆಗಳು ಈ ಡಾಕ್ಯುಮೆಂಟರಿಯಿಂದ ಜಾಗತಿಕ ಸಮುದಾಯದ ಗಮನ ಸೆಳೆದಿತ್ತು.
ಮುದುಮಲೈ ರಾಷ್ಟ್ರೀಯ ಉದ್ಯಾನವನದ ತೆಪ್ಪಕ್ಕಾಡ್ ಮತ್ತು ಅಣ್ಣಾಮಲೈನ ಕೊಝಿಕಮುತಿಯಲ್ಲಿನ ಎರಡು ಆನೆ ಶಿಬಿರಗಳಲ್ಲಿ 91 ಆನೆ ಪಾಲಕರಿದ್ದಾರೆ. ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಗೆ ಆಸ್ಕರ್ ಬಂದಿರುವ ಸಂದರ್ಭದಲ್ಲಿ, ಸ್ಟ್ಯಾಲಿನ್ 91 ಮಾವುತರು ಹಾಗೂ ಕಾವಾಡಿಗರಿಗೆ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ತಲಾ 1 ಲಕ್ಷ ರೂಪಾಯಿ ನೆರವನ್ನು ಘೋಷಿಸಿದ್ದಾರೆ.
ಇದೇ ವೇಳೆ ಸಿಎಂ ಸ್ಟ್ಯಾಲಿನ್ 91 ಮಾವುತರಿಗೆ ಪರಿಸರ ಸ್ನೇಹಿ ಮತ್ತು ಸಾಂಸ್ಕೃತಿಕವಾಗಿ ಹೊಂದಿಕೊಳ್ಳುವ ಮನೆಗಳ ನಿರ್ಮಾಣಕ್ಕಾಗಿ 9.10 ಕೋಟಿ ರೂಪಾಯಿ ಆರ್ಥಿಕ ನೆರವನ್ನು ಘೋಷಿಸಿದ್ದಾರೆ. ಇದಷ್ಟೇ ಅಲ್ಲದೇ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದ ಕೊಝಿಕಮುತಿ ಆನೆ ಶಿಬಿರದ ಸುಧಾರಣೆಗೆ ಸರ್ಕಾರವು 5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ.
Advertisement