ನವದೆಹಲಿ: ಲಂಡನ್ನಲ್ಲಿ ನೀಡಿದ ಹೇಳಿಕೆಯನ್ನು ಪ್ರಶ್ನಿಸಿ, ಆಡಳಿತರೂಢ ಸರ್ಕಾರ ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತಿರುವ ಕೋಲಾಹಲದ ನಡುವೆ, ರಾಹುಲ್ ಗಾಂಧಿ ಬುಧವಾರ 'ಎಲಾರಾ' ಎಂಬ ವಿದೇಶಿ ಘಟಕದ ಕುರಿತು ಪ್ರಶ್ನೆಗಳನ್ನು ಎತ್ತುವ ಮೂಲಕ ಅದಾನಿ ಗ್ರೂಪ್ ಮತ್ತು ಸರ್ಕಾರದ ವಿರುದ್ಧ ಹೊಸ ವಾಗ್ದಾಳಿ ನಡೆಸಿದರು.
ತಮ್ಮ ವಿದೇಶಿ ಪ್ರವಾಸದಿಂದ ರಾಷ್ಟ್ರ ರಾಜಧಾನಿಗೆ ಆಗಮಿಸಿದ ನಂತರ ರಾಹುಲ್, ಅದಾನಿ ಸಮೂಹ ಮತ್ತು ಎಲಾರಾಗೆ ಕ್ಷಿಪಣಿ ಮತ್ತು ರಾಡಾರ್ ನವೀಕರಣದ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಭಾರತದ ಕ್ಷಿಪಣಿ ಮತ್ತು ರಾಡಾರ್ ನವೀಕರಣದ ಗುತ್ತಿಗೆಯನ್ನು ಅದಾನಿ ಒಡೆತನದ ಕಂಪನಿ ಮತ್ತು ಎಲಾರಾ ಎಂಬ ಸಂಶಯಾಸ್ಪದ ವಿದೇಶಿ ಸಂಸ್ಥೆಗೆ ನೀಡಲಾಗಿದೆ. ಎಲಾರವನ್ನು ಯಾರು ನಿಯಂತ್ರಿಸುತ್ತಾರೆ?. ಅಜ್ಞಾತ ವಿದೇಶಿ ಸಂಸ್ಥೆಗಳಿಗೆ ಕಾರ್ಯತಂತ್ರದ ರಕ್ಷಣಾ ಸಾಧನಗಳ ನಿಯಂತ್ರಣವನ್ನು ನೀಡುವ ಮೂಲಕ ಭಾರತದ ರಾಷ್ಟ್ರೀಯ ಭದ್ರತೆಯನ್ನು ಏಕೆ ರಾಜಿ ಮಾಡಿಕೊಳ್ಳಲಾಗುತ್ತಿದೆ?' ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ವಿವಾದದ ಕೇಂದ್ರಬಿಂದುವಾಗಿದ್ದರೆ, ಅದಾನಿ ವಿವಾದದ ಕುರಿತಾಗಿ ಪ್ರತಿಪಕ್ಷಗಳು ಒಂದಾಗಿವೆ. ಆದರೆ, ಟಿಎಂಸಿಯು ಕಾಂಗ್ರೆಸ್ ನೇತೃತ್ವದ ಗುಂಪುಗಾರಿಕೆಯಿಂದ ದೂರ ಉಳಿದಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿಯವರ ಕ್ಷಮೆಯಾಚನೆಯ ಅಗತ್ಯವನ್ನು ತಳ್ಳಿಹಾಕಿದ್ದಾರೆ. 'ರಾಹುಲ್ ಗಾಂಧಿ ಅವರು ಯಾವುದೇ ತಪ್ಪು ಹೇಳಿಲ್ಲ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆದರೆ, ಪ್ರಧಾನಿ ವಿದೇಶದಲ್ಲಿ ಅನೇಕ ಸ್ಥಳಗಳಲ್ಲಿ ಮಾತನಾಡಿ ದೇಶವನ್ನು ಅವಮಾನಿಸಿದ್ದಾರೆ' ಎಂದು ದೂರಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಯ ಬಗ್ಗೆ ಕೋಲಾಹಲದ ನಡುವೆ, ಕಾಂಗ್ರೆಸ್ ಈ ವಿಷಯದ ಬಗ್ಗೆ ಪಕ್ಷವು ಮಣಿಯುವುದಿಲ್ಲ. ಹಿಂಡೆನ್ಬರ್ಗ್-ಅದಾನಿ ವಿಚಾರದಲ್ಲಿ ಜೆಪಿಸಿ ತನಿಖೆಗೆ ಒತ್ತಾಯಿಸುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದೆ.
ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖ್ಯಸ್ಥ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 'ಚೀನಾದಲ್ಲಿ ನಿಮ್ಮ ಹೇಳಿಕೆಯನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ. ನೀವು ಹೇಳಿದ್ದೀರಿ- 'ಮೊದಲು, ನೀವು ಭಾರತೀಯರಾಗಿ ಹುಟ್ಟಿದ್ದಕ್ಕಾಗಿ ನಾಚಿಕೆಪಡುತ್ತೀರಿ. ಈಗ ನೀವು ದೇಶವನ್ನು ಪ್ರತಿನಿಧಿಸಲು ಹೆಮ್ಮೆ ಪಡುತ್ತೀರಿ'. ಇದು ಭಾರತ ಮತ್ತು ಭಾರತೀಯರಿಗೆ ಮಾಡಿದ ಅವಮಾನವಲ್ಲವೇ? ನಿಮ್ಮ ಸಚಿವರಿಗೆ ಅವರ ನೆನಪುಗಳನ್ನು ರಿಫ್ರೆಶ್ ಮಾಡಲು ಹೇಳಿ' ಎಂದು ಟ್ವೀಟ್ ಮಾಡಿದ್ದಾರೆ.
Advertisement