ದೆಹಲಿ ಸರ್ಕಾರದ ಸ್ನೂಪಿಂಗ್ ಪ್ರಕರಣ: ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಎಫ್ ಐಆರ್ ದಾಖಲು
ದೆಹಲಿ ಸರ್ಕಾರದ ಫೀಡ್ ಬ್ಯಾಕ್ ಯೂನಿಟ್ ನ್ನು ಗೂಢಚಾರಿಕೆ ಮತ್ತು ರಾಜಕೀಯ ಗುಪ್ತಚರ ಮಾಹಿತಿ ಸಂಗ್ರಹಕ್ಕೆ ಬಳಸಿದ್ದಕ್ಕಾಗಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಯಡಿಯಾ ಮತ್ತಿತರ ಏಳು ಮಂದಿ ವಿರುದ್ಧ ಸಿಬಿಐ ಮತ್ತೊಂದು ಕೇಸ್ ದಾಖಲಿಸಿದೆ.
Published: 16th March 2023 03:22 PM | Last Updated: 16th March 2023 03:57 PM | A+A A-

ಮನೀಶ್ ಸಿಸೋಡಿಯಾ
ನವದೆಹಲಿ: ದೆಹಲಿ ಸರ್ಕಾರದ ಫೀಡ್ ಬ್ಯಾಕ್ ಯೂನಿಟ್ ನ್ನು ಗೂಢಚಾರಿಕೆ ಮತ್ತು ರಾಜಕೀಯ ಗುಪ್ತಚರ ಮಾಹಿತಿ ಸಂಗ್ರಹಕ್ಕೆ ಬಳಸಿದ್ದಕ್ಕಾಗಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಯಡಿಯಾ ಮತ್ತಿತರ ಏಳು ಮಂದಿ ವಿರುದ್ಧ ಸಿಬಿಐ ಮತ್ತೊಂದು ಕೇಸ್ ದಾಖಲಿಸಿದೆ.
ಸಿಸೋಡಿಯಾ ಮತ್ತು ದೆಹಲಿ ಸರ್ಕಾರದ ಜಾಗೃತ ವಿಭಾಗದ ಮಾಜಿ ಕಾರ್ಯದರ್ಶಿ ಸುಕೇಶ್ ಕುಮಾರ್ ಜೈನ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿಶೇಷ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದ ನಿವೃತ್ತ ಸಿಐಎಸ್ ಎಫ್ ಡಿಐಜಿ ರಾಕೇಶ್ ಕುಮಾರ್ ಸಿನ್ಹಾ ವಿರುದ್ಧ ಮಾರ್ಚ್ 14 ರಂದು ಸಿಬಿಐ ಎಫ್ ಐಆರ್ ದಾಖಲಿಸಿದೆ.
ಇವರಲ್ಲದೆ, ಗುಪ್ತಚರ ವಿಭಾಗದ ಮಾಜಿ ಜಂಟಿ ನಿರ್ದೇಶಕ ಪ್ರದೀಪ್ ಕುಮಾರ್ ಪುಂಜ್, ಸಿಐಎಸ್ ಎಫ್ ನಿವೃತ್ತ ಸಹಾಯಕ ಕಮಾಂಡೆಂಟ್ ಸತೀಶ್ ಖೇತ್ರಾಪಾಲ್ ಮತ್ತು ಕೇಜ್ರಿವಾಲ್ ಅವರ ಸಲಹೆಗಾರರಾಗಿದ್ದ ಗೋಪಾಲ್ ಮೋಹನ್ ವಿರುದ್ದವೂ ಕೇಸ್ ದಾಖಲಾಗಿದೆ.
ಕ್ರಿಮಿನಲ್ ಪಿತೂರಿ, ವಂಚನೆಯ ಉದ್ದೇಶಕ್ಕಾಗಿ ಫೋರ್ಜರಿ, ನಕಲಿ, ಸುಳ್ಳು ಖಾತೆಗಳ ಸೃಷ್ಟಿ, ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ದುರ್ನಡತೆ ಮತ್ತಿತರ ಆರೋಪಗಳ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. 2015 ರಲ್ಲಿ ಎಎಪಿ ಸರ್ಕಾರ ಸ್ಥಾಪಿಸಿದ ಫೀಡ್ ಬ್ಯಾಕ್ ಯೂನಿಟ್ ರಚನೆ ಮತ್ತು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕೇಸ್ ದಾಖಲಿಸಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ದೀರ್ಘಕಾಲ ಜೈಲಿನಲ್ಲಿಡಲು ಸಿಸೋಡಿಯಾ ವಿರುದ್ಧ ಹಲವಾರು ಸುಳ್ಳು ಪ್ರಕರಣ ದಾಖಲಿಸಲು ಪ್ರಧಾನಿ ಯೋಜನೆ: ಅರವಿಂದ್ ಕೇಜ್ರಿವಾಲ್
ದೆಹಲಿ ಸರ್ಕಾರದ ವ್ಯಾಪ್ತಿಯಲ್ಲಿರುವ ವಿವಿಧ ಸಂಸ್ಥೆಗಳ ಕಾರ್ಯನಿರ್ವಹಣೆಯ ಬಗ್ಗೆ ಸೂಕ್ತ ಮಾಹಿತಿ ಮತ್ತು ಕ್ರಮಬದ್ಧ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಮತ್ತು ಭ್ರಷ್ಟಾಚಾರವನ್ನು ಪರಿಶೀಲಿಸಲು ಟ್ರ್ಯಾಪ್ ಮಾಡಲು ಎಎಪಿ ಫೀಡ್ ಬ್ಯಾಕ್ ಯೂನಿಟ್ ರಚಿಸಿದೆ ಎಂದು ಎಫ್ ಐಆರ್ ನಲ್ಲಿ ಆರೋಪಿಸಲಾಗಿದೆ.
ರಹಸ್ಯ ಸೇವಾ ವೆಚ್ಚಕ್ಕಾಗಿ 1 ಕೋಟಿ ರೂಪಾಯಿ ನಿಬಂಧನೆಯೊಂದಿಗೆ 2016ರಲ್ಲಿ ಈ ಘಟಕ ಪ್ರಾರಂಭವಾಯಿತು ಎಂದು ಸಿಬಿಐ ಗುರುವಾರು ದಾಖಲಿಸಿರುವ ಎಫ್ ಐಆರ್ ನಲ್ಲಿ ಹೇಳಿದೆ. ಈ ಯೋಜನೆಗೆ ಮಂಜೂರು ಮಾಡಿದ ಹಣವನ್ನು ದೆಹಲಿ ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.