ಮುಂಬೈ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂಬೈಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ಬೃಹತ್ ಯೋಜನೆಗಳು, ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಒಂದರ ನಂತರ ಒಂದರಂತೆ ಗುಜರಾತ್ ಅಥವಾ ದೆಹಲಿಯಲ್ಲಿಗೆ ಸ್ಥಳಾಂತರಿಸುವ ಮೂಲಕ ಮುಂಬೈನ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಬಿಕೆಸಿಯಲ್ಲಿ ಮಹಾ ವಿಕಾಸ್ ಅಘಾಡಿಯ ಮೆಗಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, ಮಹಾರಾಷ್ಟ್ರದಿಂದ ಮೆಗಾ ಅಭಿವೃದ್ಧಿ ಯೋಜನೆಗಳನ್ನು ಸ್ಥಳಾಂತರಿಸಲು ಬಿಜೆಪಿ ಏಕನಾಥ್ ಶಿಂಧೆ ಅವರನ್ನು ಬಳಸಿಕೊಂಡು ನಮ್ಮ ಸರ್ಕಾರವನ್ನು ಪತನಗೊಳಿಸಿತು ಎಂದು ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರ ಉರುಳಿಸಿದ ನಂತರ, ಹೊಸ ಸರ್ಕಾರ ಬುಲೆಟ್ ರೈಲಿಗಾಗಿ ಬೆಲೆಬಾಳುವ ಬಿಕೆಸಿ ಪ್ಲಾಟ್ ಅನ್ನು ಹಸ್ತಾಂತರಿಸಿತು. ಪ್ರತಿದಿನ ಮುಂಬೈನಿಂದ ಅಹಮದಾಬಾದ್ಗೆ ಎಷ್ಟು ಜನ ಪ್ರಯಾಣಿಸುತ್ತಾರೆ? ಇಂತಹ ಯೋಜನೆಗಳನ್ನು ಮಹಾರಾಷ್ಟ್ರದ ಮೇಲೆ ಏಕೆ ಹೇರಲಾಗಿದೆ ಎಂದು ಠಾಕ್ರೆ ಪ್ರಶ್ನಿಸಿದರು.
ಈ ಮುಂಚೆ ಎಸಿಸಿ ಮತ್ತು ಅಂಬುಜಾ ಸಿಮೆಂಟ್ ಮುಖ್ಯ ಕಚೇರಿಗಳು ಮುಂಬೈನಲ್ಲಿದ್ದವು. ಆದರೆ ಗೌತಮ್ ಅದಾನಿ ಅವುಗಳನ್ನು ವಹಿಸಿಕೊಂಡ ನಂತರ ಆ ಎರಡೂ ಸಂಸ್ಥೆಗಳ ಮುಖ್ಯ ಕಚೇರಿಗಳು ಗುಜರಾತ್ಗೆ ಸ್ಥಳಾಂತರಗೊಂಡವು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಹಣಕಾಸು ಕೇಂದ್ರಗಳ ಕಚೇರಿಗಳನ್ನು ಗುಜರಾತ್ಗೆ ಸ್ಥಳಾಂತರಿಸಲಾಗಿದೆ. ನಾವು ಒಂದರ ನಂತರ ಒಂದರಂತೆ ಬೃಹತ್ ಯೋಜನೆಗಳನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಹಾಗೂ ಹಣಕಾಸು ಸಂಸ್ಥೆಗಳನ್ನು ಗುಜರಾತ್ ಅಥವಾ ದೆಹಲಿಗೆ ಸ್ಥಳಾಂತರಿಸಲಾಗಿದೆ ಎಂದು ಠಾಕ್ರೆ ಆರೋಪಿಸಿದ್ದಾರೆ.
Advertisement