ದೆಹಲಿ: ತಿಹಾರ್ ಜೈಲಿನಲ್ಲಿ ಮತ್ತೊಂದು ಗ್ಯಾಂಗ್ ವಾರ್; ರೌಡಿ ತಿಲ್ಲು ತಾಜ್​ಪುರಿಯಾ ಹತ್ಯೆ

ದೇಶದ ರಾಜಧಾನಿ ದೆಹಲಿಯ ತಿಹಾರ್ ಜೈಲಿನಲ್ಲಿ ಮತ್ತೊಂದು ಗ್ಯಾಂಗ್ ವಾರ್ ನಡೆದಿದ್ದು, ಕುಖ್ಯಾತ ರೌಡಿ ತಿಲ್ಲು ತಾಜ್​ಪುರಿಯಾನನ್ನು ಹತ್ಯೆ ಮಾಡಲಾಗಿದೆ.
ಕುಖ್ಯಾತ ರೌಡಿ ತಿಲ್ಲು ತಾಜ್​ಪುರಿಯಾ
ಕುಖ್ಯಾತ ರೌಡಿ ತಿಲ್ಲು ತಾಜ್​ಪುರಿಯಾ

ನವದೆಹಲಿ: ದೇಶದ ರಾಜಧಾನಿ ದೆಹಲಿಯ ತಿಹಾರ್ ಜೈಲಿನಲ್ಲಿ ಮತ್ತೊಂದು ಗ್ಯಾಂಗ್ ವಾರ್ ನಡೆದಿದ್ದು, ಕುಖ್ಯಾತ ರೌಡಿ ತಿಲ್ಲು ತಾಜ್​ಪುರಿಯಾನನ್ನು ಹತ್ಯೆ ಮಾಡಲಾಗಿದೆ.

ಹೌದು.. ತಿಹಾರ್​ ಜೈಲಿನಲ್ಲಿ ಮತ್ತೊಮ್ಮೆ ಗ್ಯಾಂಗ್​ವಾರ್​ ನಡೆದ ವರದಿಯಾಗಿದ್ದು ರೌಡಿ ತಿಲ್ಲು ತಾಜ್​ಪುರಿಯಾನನ್ನು ಹತ್ಯೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನಾಲ್ವರು ಕೈದಿಗಳು ತಿಲ್ಲು ತಾಜ್‌ಪುರಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದು, ಇವರು ಗೋಗಿ ಗ್ಯಾಂಗ್‌ಗೆ ಸೇರಿದವರು ಎನ್ನಲಾಗಿದೆ.

ತಿಲ್ಲು ಮೇಲೆ ದಾಳಿ ಮಾಡಿದ ರೌಡಿಯನ್ನು ಯೋಗೇಶ್ ತುಂಡ ಎಂದು ಗುರುತಿಸಲಾಗಿದ್ದು, ತಿಲ್ಲು ತಾಜ್‌ಪುರಿಯ ವಿರುದ್ಧ ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಕೆಲವು ತಿಂಗಳುಗಳ ಹಿಂದೆ ರೋಹಿಣಿ ನ್ಯಾಯಾಲಯದ ಕೋರ್ಟ್‌ ಕೊಠಡಿಯಲ್ಲಿ ಗ್ಯಾಂಗ್​ಸ್ಟರ್ ಜಿತೇಂದ್ರ ಗೋಗಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ತಿಲ್ಲು ಕೈವಾಡ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಹಲ್ಲೆ ಬಳಿಕ ತಿಲ್ಲುನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಆತ ಅಷ್ಚು ಹೊತ್ತಿಗಾಗಲೇ ಸಾವನ್ನಪ್ಪಿದ್ದ ಎಂದು ಆತನನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೋರ್ವ ಖೈದಿ ರೋಹಿತ್ ಕೂಡ ದಾಳಿಯಲ್ಲಿ ಗಾಯಗೊಂಡಿದ್ದು, ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಯೋಗೇಶ್ ತುಂಡಾ, ದೀಪಕ್ ತೀತಾರ್, ರಿಯಾಜ್ ಖಾನ್ ಮತ್ತು ರಾಜೇಶ್ ಅವರು ಜೈಲಿನ ಮೊದಲ ಮಹಡಿಯಲ್ಲಿರುವ ಅವರ ವಾರ್ಡ್‌ನ ಕಬ್ಬಿಣದ ಗ್ರಿಲ್‌ಗಳನ್ನು ಮುರಿದು ನುಗ್ಗಿದ್ದಾರೆ. ಅವರು ತಮ್ಮ ಇತರ ಗ್ಯಾಂಗ್ ಸದಸ್ಯರೊಂದಿಗೆ ನೆಲ ಅಂತಸ್ತಿನ ವಾರ್ಡ್‌ನಲ್ಲಿ ಇರಿಸಲಾಗಿದ್ದ ಟಿಲ್ಲು ಅವರ ಮೇಲೆ ಅದೇ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ದೇಶದ ಅತ್ಯಂತ ಸುರಕ್ಷಿತ ಜೈಲುಗಳಲ್ಲಿ ಪ್ರಮುಖವಾಗಿರುವ ತಿಹಾರ್ ಜೈಲಿನಲ್ಲೇ ಇಂತಹ ಘಟನೆ ಜರುಗಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com