ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ನೋಡಿದ ಮೇಲೆ ನಾನು ಹೋಗದೇ ಇದ್ದುದ್ದಕ್ಕೆ ಸಂತೋಷ ಪಡುತ್ತೇನೆ: ಶರದ್ ಪವಾರ್
ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗದೇ ಇದ್ದುದ್ದಕ್ಕೆ ಸಂತೋಷವಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
Published: 28th May 2023 10:40 PM | Last Updated: 29th May 2023 01:56 PM | A+A A-

ಶರದ್ ಪವಾರ್
ಮುಂಬೈ: ಹೊಸ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗದೇ ಇದ್ದುದ್ದಕ್ಕೆ ಸಂತೋಷವಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಬೆಳಿಗ್ಗೆ ಸಂಸತ್ ಉದ್ಘಾಟನೆ ಕಾರ್ಯಕ್ರಮವನ್ನು ನೋಡಿದ ಬಳಿಕ ನಾನು ಹೋಗದೇ ಇದ್ದಿದ್ದಕ್ಕೆ ಸಂತೋಷಪಡುತ್ತೇನೆ. ಅಲ್ಲಿ ಏನು ನಡೆಯಿತು ಎಂಬುದನ್ನು ನೋಡಿದ ಬಳಿಕ ನಾನು ಚಿಂತಿತನಾಗಿದ್ದೇನೆ, ನಾವು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದೇವೆಯೇ? ಈ ಕಾರ್ಯಕ್ರಮವು ಸೀಮಿತ ಜನರಿಗೆ ಮಾತ್ರವೇ?" ಎಂದು ಹೋಮ-ಹವನಗಳ ಮೂಲಕ, ಬಹು ನಂಬಿಕೆಯ ಪ್ರಾರ್ಥನೆಗಳು ಮತ್ತು 'ಸೆಂಗೊಲ್' ಸ್ಥಾಪನೆಯೊಂದಿಗೆ ಹೊಸ ಸಂಸತ್ತಿನ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದರ ಬಗ್ಗೆ ಶರದ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಏನೇ ನಡೆದರೂ ಅದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಮಾಜದ ಪರಿಕಲ್ಪನೆಗೆ ವ್ಯತಿರಿಕ್ತವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ‘ಅಖಂಡ ಭಾರತ’ ನಕ್ಷೆ: 'ಸಂಕಲ್ಪ ಸ್ಪಷ್ಟ' ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ!
"ಆಧುನಿಕ ವಿಜ್ಞಾನದ ಆಧಾರದ ಮೇಲೆ ಸಮಾಜವನ್ನು ನಿರ್ಮಿಸುವ ಪರಿಕಲ್ಪನೆಯನ್ನು ಹೊಂದಿದ್ದ ಪಂಡಿತ್ ನೆಹರೂ ಅವರ ಚಿಂತನೆಗಳಿಗೆ ಈ ಕಾರ್ಯಕ್ರಮ ತದ್ವಿರುದ್ಧವಾಗಿದೆ. ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರನ್ನು ಆಹ್ವಾನಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು, ಆದರೆ ಉಪಾಧ್ಯಕ್ಷ ಜಗದೀಪ್ ಧಂಖರ್, ರಾಜ್ಯಸಭೆಯ ಮುಖ್ಯಸ್ಥರು ಅಲ್ಲಿರಲಿಲ್ಲ. ಆದ್ದರಿಂದ ಇಡೀ ಕಾರ್ಯಕ್ರಮವು ಸೀಮಿತ ಜನರಿಗೆ ಇದ್ದಂತೆ ತೋರುತ್ತಿದೆ...," ಎಂದು ಅವರು ಹೇಳಿದರು.
ಜನರು ಹಳೆಯ ಸಂಸತ್ತಿನೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದ್ದಾರೆ ಮತ್ತು ಪ್ರತಿಪಕ್ಷಗಳೊಂದಿಗೆ ಹೊಸ ಸಂಸತ್ತಿನ ಬಗ್ಗೆ ಏನನ್ನೂ ಚರ್ಚಿಸಲಾಗಿಲ್ಲ ಎಂದು ಶ್ರೀ ಪವಾರ್ ಹೇಳಿದರು. "ಅದರ ಸದಸ್ಯರಾಗಿ ಅಷ್ಟೇ ಅಲ್ಲದೇ, ನಮಗೆ ಹಳೆಯ ಸಂಸತ್ತಿನೊಂದಿಗೆ ವಿಶೇಷ ಸಂಬಂಧವಿದೆ. ಈ ಹೊಸ ಕಟ್ಟಡದ ಬಗ್ಗೆ ನಮ್ಮೊಂದಿಗೆ ಏನನ್ನೂ ಚರ್ಚಿಸಿಲ್ಲ ... ಎಲ್ಲರೂ ಅದರಲ್ಲಿ ತೊಡಗಿಸಿಕೊಂಡಿದ್ದರೆ ಉತ್ತಮ" ಎಂದು ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.