ನೂತನ ಸಂಸತ್ ಭವನದಲ್ಲಿ ‘ಅಖಂಡ ಭಾರತ’ ನಕ್ಷೆ: 'ಸಂಕಲ್ಪ ಸ್ಪಷ್ಟ' ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ!
ಇಂದು ಲೋಕಾರ್ಪಣೆಯಾದ ನೂತನ ಸಂಸತ್ ಭವನದ ಗೋಡೆಗಳ ಮೇಲೆ ಚಿತ್ರಿಸಲಾಗಿರುವ ಹಲವು ಚಿತ್ರಣಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದು ಪ್ರಮುಖವಾಗಿ ಅಖಂಡ ಭಾರತದ ಚಿತ್ರಣ ಇದೀಗ ಎಲ್ಲರ ಗಮನ ಕೇಂದ್ರೀಕರಿಸಿದೆ.
Published: 28th May 2023 09:56 PM | Last Updated: 28th May 2023 09:56 PM | A+A A-

ಅಖಂಡ ಭಾರತ ಪರಿಕಲ್ಪನೆಯ ಚಿತ್ರಣ
ನವದೆಹಲಿ: ಇಂದು ಲೋಕಾರ್ಪಣೆಯಾದ ನೂತನ ಸಂಸತ್ ಭವನದ ಗೋಡೆಗಳ ಮೇಲೆ ಚಿತ್ರಿಸಲಾಗಿರುವ ಹಲವು ಚಿತ್ರಣಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದು ಪ್ರಮುಖವಾಗಿ ಅಖಂಡ ಭಾರತದ ಚಿತ್ರಣ ಇದೀಗ ಎಲ್ಲರ ಗಮನ ಕೇಂದ್ರೀಕರಿಸಿದೆ.
ಇದೇ ವಿಚಾರವಾಗಿ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕೇಂದ್ರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, 'ಭಾರತದ ಸಂಕಲ್ಪ ಸ್ಪಷ್ಟವಾಗಿದೆ. ಅಖಂಡ ಭಾರತ ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಕರ್ನಾಟಕ ಘಟಕ ಕೂಡಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇದೇ ಫೋಟೋ ಪ್ರಕಟಿಸಿದೆ. ಜೊತೆಯಲ್ಲೇ ಚಾಣಕ್ಯ, ಸರ್ದಾರ್ ವಲ್ಲಭಭಾಯ್ ಪಟೇಲ್, ಬಿ. ಆರ್. ಅಂಬೇಡ್ಕರ್ ಅವರ ಚಿತ್ರಣಗಳನ್ನೂ ಪ್ರಕಟಿಸುವ ಜೊತೆಯಲ್ಲೇ ಭಾರತದ ಸಾಂಸ್ಕೃತಿಕ ವೈವಿದ್ಯತೆ ಬಿಂಬಿಸುವ ಫೋಟೋಗಳನ್ನೂ ಪ್ರಕಟಿಸಿದೆ.
ಇದನ್ನೂ ಓದಿ: ನೂತನ ಸಂಸತ್ ಭವನ ಕೇವಲ ಕಟ್ಟಡವಲ್ಲ, ಇದು ಭಾರತದ 140 ಕೋಟಿ ಜನರ ಆಕಾಂಕ್ಷೆಯ ಸಂಕೇತವಾಗಿದೆ: ಪ್ರಧಾನಿ ಮೋದಿ
ಇವೆಲ್ಲವೂ ಭಿತ್ತಿ ಚಿತ್ರದ ರೂಪದಲ್ಲಿ ನೂತನ ಸಂಸತ್ ಭವನದ ಗೋಡೆಗಳ ಮೇಲೆ ರಾರಾಜಿಸುತ್ತಿವೆ. ನೂತನ ಸಂಸತ್ ಭವನದ ಒಳಾಂಗಣ ವಿನ್ಯಾಸದ ಕೆಲ ಚಿತ್ರಗಳು ಎಂದು ವಿವರಿಸಿರುವ ಕರ್ನಾಟಕ ಬಿಜೆಪಿ, ಇದು ನಮ್ಮ ಹೆಮ್ಮೆಯ ಭವ್ಯ ನಾಗರಿಕತೆಯ ಜೀವಂತಿಕೆಯ ಸಂಕೇತ ಎಂದು ಬಣ್ಣಿಸಿದೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನೂ ಅರ್ಪಿಸಿದೆ.
ಸಂಕಲ್ಪ ಸ್ಪಷ್ಟವಾಗಿದೆ - ಅಖಂಡ ಭಾರತ #NewParliamentBuilding#MyParliamentMyPride pic.twitter.com/tkVtu3CCoh
— Pralhad Joshi (@JoshiPralhad) May 28, 2023
ಚರ್ಚೆಗೆ ಗ್ರಾಸವಾದ ಅಖಂಡ ಭಾರತ
ನೂತನ ಸಂಸತ್ ಭವನದಲ್ಲಿ ಚಿತ್ರಿಸಲಾಗಿರುವ ಅಖಂಡ ಭಾರತ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವು ಸಂಸದರು ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಸಂಕಲ್ಪ ಸ್ಪಷ್ಟವಾಗಿದೆ. ಅಖಂಡ ಭಾರತ ಎಂದು ಫೋಟೋ ಜೊತೆಗೆ ಟ್ವೀಟ್ ಮಾಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈಶಾನ್ಯ ಮುಂಬೈ ಸಂಸದ ಮನೋಜ್ ಕೋಟಕ್ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ಸಂಸತ್ನಲ್ಲಿ ಚಿತ್ರಿಸಿರುವ ಅಖಂಡ ಭಾರತವು ದೇಶದ ಶಕ್ತಿ ಹಾಗೂ ಸ್ವಾವಲಂಬನೆಯ ಸಂಕೇತ ಎಂದಿದ್ಧಾರೆ.
ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ಹಲ್ಲೆ; ಪಟ್ಟಾಭಿಷೇಕ ಮುಗಿದಿದೆ, ರಾಜ ಜನರನ್ನು ಬೀದಿಗೆ ತಳ್ಳಿದ್ದಾರೆ: ರಾಹುಲ್ ಗಾಂಧಿ
ಅಖಂಡ ಭಾರತದ ಚಿತ್ರಣವನ್ನು ನೂತನ ಸಂಸತ್ ಭವನದ ಗೋಡೆಗಳ ಮೇಲೆ ಕಲಾವಿದರು ಅರಳಿಸಿದ್ದು, ಭಾರತವನ್ನು ಆಳಿದ ರಾಜ ಮನೆತನಗಳು ಸೇರಿದಂತೆ ಹಲವು ವಿವರಗಳಿವೆ. ಅಖಂಡ ಭಾರತದಲ್ಲಿ ಇಂದಿನ ಪಾಕಿಸ್ತಾನ ಕೂಡಾ ಸೇರಿರೋದು ಗಮನಾರ್ಹ. ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ನಿರ್ದೇಶಕರಾದ ಅದ್ವೈತ್ ಗದಾನಾಯಕ್ ಅವರು ಅಖಂಡ ಭಾರತ ಪರಿಕಲ್ಪನೆ ಕುರಿತಾಗಿ ವಿವರಿಸಿದ್ದಾರೆ. ಈ ಕಲೆಯ ಹಿಂದೆ ಪ್ರಾಚೀನ ಭಾರತದ ಪ್ರಭಾವ ಇದೆ ಎಂದರು. ಈ ಚಿತ್ರಣದಲ್ಲಿ ಈಗಿನ ಅಫ್ಘಾನಿಸ್ತಾನ, ಪಾಕಿಸ್ತಾನ ಸೇರಿದಂತೆ ಆಗ್ನೇಯ ಏಷ್ಯಾದ ಹಲವು ರಾಷ್ಟ್ರಗಳನ್ನು ಸೇರಿಸಲಾಗಿದೆ ಎಂದು ಹೇಳಿದರು. ನೂತನ ಸಂಸತ್ ಭವನ ಕಟ್ಟಡದ ಒಳಗೋಡೆಯಲ್ಲಿ ಅಳವಡಿಸಲಾಗಿರುವ ಕಲಾಕೃತಿಗಳನ್ನು ಆಯ್ಕೆ ಮಾಡಿಕೊಳ್ಳಲುವಲ್ಲಿ ಗದಾನಾಯಕ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ: ಕುಸ್ತಿಪಟುಗಳ ಬಂಧನ: ಮೊದಲ ದಿನವೇ ಸೆಂಗೋಲ್ ಗೆ ‘ಅಪಮಾನ’ - ತಮಿಳು ಸಿಎಂ ಸ್ಟಾಲಿನ್
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಕಾರ ಅಖಂಡ ಭಾರತ ಪರಿಕಲ್ಪನೆಯು ಅವಿಭಜಿತ ಭಾರತ ಭೂಖಂಡವನ್ನ ಪ್ರತಿನಿಧಿಸುತ್ತದೆ. ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ ದೇಶ, ಶ್ರೀಲಂಕಾ, ಮಯನ್ಮಾರ್ ಹಾಗೂ ಥೈಲ್ಯಾಂಡ್ ದೇಶಗಳು ಪ್ರಾಚೀನ ಅಖಂಡ ಭಾರತ ಪರಿಕಲ್ಪನೆ ಅಡಿ ಬರುತ್ತವೆ.