Money laundering case: ಟಿಎಂಸಿ ನಾಯಕಿ Mahua Moitra, ಉದ್ಯಮಿ ಹಿರಾನಂದಾನಿ ವಿರುದ್ಧ ED ಕೇಸ್ ದಾಖಲು!

ಕಾಸಿಗಾಗಿ ಪ್ರಶ್ನೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿರುವಂತೆಯೇ ಇತ್ತ ಟಿಎಂಸಿ ನಾಯಕಿ ಮಹುವಾ ಮೋಯಿತ್ರಾಗೆ ಇಡಿ ಸಂಕಷ್ಟ ಆರಂಭವಾಗಿದೆ.
ಟಿಎಂಸಿ ನಾಯಕಿ ಮಹುವಾ ಮೋಯಿತ್ರಾ
ಟಿಎಂಸಿ ನಾಯಕಿ ಮಹುವಾ ಮೋಯಿತ್ರಾPTI

ನವದೆಹಲಿ: ಕಾಸಿಗಾಗಿ ಪ್ರಶ್ನೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿರುವಂತೆಯೇ ಇತ್ತ ಟಿಎಂಸಿ ನಾಯಕಿ ಮಹುವಾ ಮೋಯಿತ್ರಾಗೆ ಇಡಿ ಸಂಕಷ್ಟ ಆರಂಭವಾಗಿದೆ.

ತೃಣಮೂಲ ಕಾಂಗ್ರೆಸ್ (TMC) ನಾಯಕಿ ಮಹುವಾ ಮೊಯಿತ್ರಾ (Mahua Moitra) ವಿರುದ್ಧ ಜಾರಿ ನಿರ್ದೇಶನಾಲಯ (Enforcement Directorate) ಮಂಗಳವಾರ ಹಣ ಅಕ್ರಮ ವರ್ಗಾವಣೆ (Money laundering) ಪ್ರಕರಣ ದಾಖಲಿಸಿದೆ.

ಟಿಎಂಸಿ ನಾಯಕಿ ಮಹುವಾ ಮೋಯಿತ್ರಾ
ಫೆಮಾ ಪ್ರಕರಣ: ನಾಳೆ ವಿಚಾರಣೆಗೆ ಹಾಜರಾಗುವಂತೆ ಮಹುವಾ ಮೊಯಿತ್ರಾಗೆ ಇಡಿ ಸಮನ್ಸ್

ಸಂಸದ ಸ್ಥಾನದಿಂದ ಉಚ್ಚಾಟಿತಗೊಂಡಿರುವ ಟಿಎಂಸಿ ನಾಯಕಿ ಮೋಯಿತ್ರಾ ವಿರುದ್ಧ ಕೇಂದ್ರ ತನಿಖಾ ದಳ (CBI) ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಈ ಪ್ರಕರಣವನ್ನು ದಾಖಲಿಸಿಕೊಂಡಿದೆ. ವಿಚಾರಣೆಗಾಗಿ ತನ್ನ ದೆಹಲಿ ಕಚೇರಿಗೆ ಹಾಜರಾಗುವಂತೆ ನೀಡಿದ್ದ ಏಜೆನ್ಸಿಯ ಸಮನ್ಸ್ ಅನ್ನು ಮಹುವಾ ಮೊಯಿತ್ರಾ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಇ.ಡಿ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ದುಬೈ ಮೂಲದ ಉದ್ಯಮಿಗೂ ಸಂಕಷ್ಟ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಪ್ರಕರಣದಲ್ಲಿ ಮಹುವಾ ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಇ.ಡಿ ಸಮನ್ಸ್ ನೀಡಿತ್ತು.

ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ನಗದು ಮತ್ತು ಉಡುಗೊರೆಗಳಿಗೆ ಬದಲಾಗಿ ಮೊಯಿತ್ರಾ ಅವರು ಸಂಸತ್ತಿನ ಕೆಳಮನೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಲೋಕಪಾಲ್ ಈ ನಿರ್ದೇಶನ ನೀಡಿತ್ತು. ಮಹುವಾ ಮೊಯಿತ್ರಾ ಅವರ ವಿರುದ್ಧ ಕೇಳಿ ಬಂದ ಕಾಸಿಗಾಗಿ ಪ್ರಶ್ನೆ ಆರೋಪಗಳ ಬಗ್ಗೆ ತನಿಖೆ ನಡೆಸಿ ಆರು ತಿಂಗಳೊಳಗೆ ತನ್ನ ಮುಂದೆ ವರದಿ ಸಲ್ಲಿಸುವಂತೆ ಭ್ರಷ್ಟಾಚಾರ ವಿರೋಧಿ ಒಂಬಡ್ಸ್ ಮನ್ ಲೋಕಪಾಲ್ ಇತ್ತೀಚೆಗೆ ಸಿಬಿಐಗೆ ನಿರ್ದೇಶನ ನೀಡಿತ್ತು.

ಏನಿದು ಪ್ರಕರಣ?

49 ವರ್ಷದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು 2 ಕೋಟಿ ರೂ. ನಗದು ಸೇರಿದಂತೆ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ನೀಡಿ ಅವರಿಂದ ಲಂಚ ಸ್ವೀಕಾರ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಲಾಗಿನ್‌ ವಿವರ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದರು. ಅಲ್ಲದೆ ಇದು ಸಂಸದರಲ್ಲಿ ಸಾಮಾನ್ಯ ಅಭ್ಯಾಸ ಎಂದು ವಾದಿಸಿದ್ದರು. ಈ ಸಂಬಂಧ ಕ್ರಮ ಕೈಗೊಳ್ಳಲು ನೇಮಕವಾಗಿದ್ದ ಆರು ಸದಸ್ಯರ ಸಮಿತಿಯಲ್ಲಿ ನಾಲ್ಕು ಮಂದಿ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಲು ಮತ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಡಿಸೆಂಬರ್ 8, 2023ರಂದು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು.

ಗಮನ ಸೆಳೆದ ಕೃಷ್ಣನಗರ ಕ್ಷೇತ್ರ

ಅಂದಹಾಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಮಹುವಾ ಮೋಯಿತ್ರಾ ಅವರು ಟಿಎಂಸಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರು ಬಿಜೆಪಿಯ ಕಲ್ಯಾಣ್‌ ಚೌಬೆ ವಿರುದ್ಧ ಜಯ ಗಳಿಸಿದ್ದರು. ಈ ಬಾರಿ ಟಿಎಂಸಿ ನಾಯಕಿ ವಿರುದ್ಧ ಬಿಜೆಪಿ ರಾಜ್‌ಬರಿಯ ರಾಜಮಾತೆ ಅಮೃತಾ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಹಾರಾಜ ಕೃಷ್ಣಚಂದ್ರ ರಾಯ್‌ ಅವರ ಕುಟುಂಬಸ್ಥರಾದ ಅಮೃತಾ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಹೀಗಾಗಿ ಸದ್ಯ ಈ ಕ್ಷೇತ್ರ ದೇಶದ ಗಮನ ಸೆಳೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com