ನವದೆಹಲಿ: ಸೈನಿಕ ಶಾಲೆಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ಈ ನಿರ್ಧಾರವನ್ನು ಹಿಂಪಡೆಯಬೇಕು ಮತ್ತು ಈ ಸಂಬಂಧ ಸಹಿ ಮಾಡಲಾದ ಒಪ್ಪಂದಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದಲ್ಲಿ 33 ಸೈನಿಕ ಶಾಲೆಗಳಿವೆ ಮತ್ತು ಅವು ರಕ್ಷಣಾ ಸಚಿವಾಲಯದ(MoD) ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆ ಸೈನಿಕ್ ಸ್ಕೂಲ್ಸ್ ಸೊಸೈಟಿ (SSS) ಅಡಿಯಲ್ಲಿ ಸಂಪೂರ್ಣವಾಗಿ ಸರ್ಕಾರಿ ಅನುದಾನಿತ ಸಂಸ್ಥೆಗಳಾಗಿವೆ ಎಂದು ಖರ್ಗೆ ಹೇಳಿದ್ದಾರೆ.
ರಾಷ್ಟ್ರಪತಿಗಳಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ, ಭಾರತೀಯ ಪ್ರಜಾಪ್ರಭುತ್ವವು ಸಾಂಪ್ರದಾಯಿಕವಾಗಿ ಸಶಸ್ತ್ರ ಪಡೆಗಳನ್ನು ಯಾವುದೇ ಪಕ್ಷಪಾತದ ರಾಜಕೀಯದಿಂದ ದೂರವಿಟ್ಟಿದೆ. ಆದರೆ ಕೇಂದ್ರ ಸರ್ಕಾರವು ಈ ಸುಸಂಘಟಿತ ಸಮಾವೇಶವನ್ನು "ಮುರಿದಿದೆ" ಎಂದು ಖರ್ಗೆ ತಿಳಿಸಿದ್ದಾರೆ.
"ಹಲವು ಸರ್ಕಾರಿ ಸಂಸ್ಥೆಗಳನ್ನು ದುರ್ಬಲಗೊಳಿಸಿದ ನಂತರ, ಆರ್ಎಸ್ಎಸ್ ತನ್ನ ಸಿದ್ಧಾಂತವನ್ನು ಸಶಸ್ತ್ರ ಪಡೆಗಳ ಮೇಲೆ ಹೇರಲು ಈ ಯೋಜನೆ ರೂಪಿಸಿದೆ. ಈ ಮೂಲಕ ಅವರು ಸಶಸ್ತ್ರ ಪಡೆಗಳ ಸ್ವಭಾವ ಮತ್ತು ನೈತಿಕತೆಗೆ ಹೊಡೆತ ನೀಡುತ್ತಿದ್ದಾರೆ" ಎಂದು ಖರ್ಗೆ ಆರೋಪಿಸಿದ್ದಾರೆ.
"ಈ ರೀತಿಯ ಸಂಸ್ಥೆಗಳ ಮೇಲೆ ಸಿದ್ಧಾಂತ ಹೇರಿದರೆ ಅದು ಎಲ್ಲರ ಒಳಗೊಳ್ಳುವಿಕೆಯನ್ನು ಹಾಳು ಮಾಡುತ್ತದೆ. ಪಕ್ಷಪಾತದ ಧಾರ್ಮಿಕ/ಕಾರ್ಪೊರೇಟ್/ಕುಟುಂಬ/ಸಾಮಾಜಿಕ/ಸಾಂಸ್ಕೃತಿಕ ನಡವಳಿಕೆಗಳನ್ನು ಸೈನಿಕ ಶಾಲೆಗಳ ಮೇಲೆ ಹೇರುವ ಮೂಲಕ ಆ ಶಾಲೆಗಳ ರಾಷ್ಟ್ರೀಯ ಮಾನ್ಯತೆಗೂ ಧಕ್ಕೆಯಾಗುತ್ತದೆ ಎಂದು ಖರ್ಗೆ ಹೇಳಿದ್ದಾರೆ.
ಆದ್ದರಿಂದ, ರಾಷ್ಟ್ರೀಯ ಹಿತಾಸಕ್ತಿಯಿಂದ ಈ ಖಾಸಗೀಕರಣ ನೀತಿಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಮತ್ತು ಈ ಎಂಒಯುಗಳನ್ನು ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.
Advertisement