ಆಪತ್ಬಾಂಧವರಾದ ಅರಣ್ಯ ಸಿಬ್ಬಂದಿ: ವಯನಾಡ್ ಭೂಕುಸಿತದ 4 ದಿನಗಳ ನಂತರ ಗುಹೆಯೊಂದರಿಂದ 4 ಮಕ್ಕಳ ರಕ್ಷಣೆ, Video

ಈ ಭೀಕರ ದುರಂತದ ನಡುವೆ, ಭೂಕುಸಿತ ಪೀಡಿತ ವಯನಾಡಿನಲ್ಲಿ ಕೇರಳ ಅರಣ್ಯಾಧಿಕಾರಿಗಳು ದಣಿವರಿಯದ 8 ಗಂಟೆಗಳ ಕಾರ್ಯಾಚರಣೆಯ ನಂತರ ಅರಣ್ಯದಲ್ಲಿ 6 ಮಂದಿಯನ್ನು ರಕ್ಷಿಸಿದ ಒಳ್ಳೆಯ ಸುದ್ದಿ ಕೂಡ ಬೆಳಕಿಗೆ ಬಂದಿದೆ.
Wayanad cave rescue
ಬುಡಕಟ್ಟು ಮಕ್ಕಳ ರಕ್ಷಣೆ
Updated on

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಇದುವರೆಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹೆಚ್ಚಿನ ಸಂಖ್ಯೆಯ ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಈ ಭೀಕರ ದುರಂತದ ನಡುವೆ, ಭೂಕುಸಿತ ಪೀಡಿತ ವಯನಾಡಿನಲ್ಲಿ ಕೇರಳ ಅರಣ್ಯಾಧಿಕಾರಿಗಳು ದಣಿವರಿಯದ 8 ಗಂಟೆಗಳ ಕಾರ್ಯಾಚರಣೆಯ ನಂತರ ಅರಣ್ಯದಲ್ಲಿ 6 ಮಂದಿಯನ್ನು ರಕ್ಷಿಸಿದ ಒಳ್ಳೆಯ ಸುದ್ದಿ ಕೂಡ ಬೆಳಕಿಗೆ ಬಂದಿದೆ.

ಈ ರಕ್ಷಣಾ ಕಾರ್ಯಾಚರಣೆಗೆ ಪ್ರತಿಕ್ರಿಯಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್, 'ಅರಣ್ಯ ಅಧಿಕಾರಿಗಳ ಈ ಮನೋಭಾವವು ಬಿಕ್ಕಟ್ಟಿನ ಕರಾಳ ಸಮಯದಲ್ಲೂ ಕೇರಳದ ಚೈತನ್ಯವನ್ನು ಬೆಳಗಿಸುವುದನ್ನು ನಮಗೆ ನೆನಪಿಸುತ್ತದೆ. ನಾವು ಒಗ್ಗಟ್ಟಿನಿಂದ ಪುನರ್ನಿರ್ಮಾಣ ಮಾಡುತ್ತೇವೆ. ಬಲಶಾಲಿಯಾಗುತ್ತೇವೆ" ಎಂದು ಹೇಳಿದರು.

ಕಲಪೆಟ್ಟಾ ವಲಯ ಅರಣ್ಯಾಧಿಕಾರಿ ಕೆ. ಹಶಿಸ್ ನೇತೃತ್ವದ ನಾಲ್ವರ ತಂಡ ಗುರುವಾರ ಅರಣ್ಯದೊಳಗಿನ ಅಪಾಯಕಾರಿ ಮಾರ್ಗವನ್ನು ದಾಟಿ ಬುಡಕಟ್ಟು ಕುಟುಂಬವನ್ನು ರಕ್ಷಿಸುವ ಮೂಲಕ ಈ ರಕ್ಷಣಾ ಕಾರ್ಯಾಚರಣೆ ನಡೆಸಿತು. ರಕ್ಷಿಸಲ್ಪಟ್ಟ ಮಕ್ಕಳಲ್ಲಿ ಬುಡಕಟ್ಟು ಸಮುದಾಯದ ಒಂದರಿಂದ ನಾಲ್ಕು ವರ್ಷದೊಳಗಿನ ನಾಲ್ಕು ಮಕ್ಕಳು ಸೇರಿದ್ದಾರೆ.

ವಯನಾಡ್‌ನ ಪನಿಯಾ ಸಮುದಾಯಕ್ಕೆ ಸೇರಿದ ಕುಟುಂಬವು ಬೆಟ್ಟದ ಮೇಲಿರುವ ಆಳವಾದ ಕಮರಿಯ ಗುಹೆಯಲ್ಲಿ ಸಿಲುಕಿತ್ತು. ಸಿಬ್ಬಂದಿ ಅಲ್ಲಿಗೆ ತಲುಪಲು ನಾಲ್ಕೂವರೆ ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿತ್ತು. ಈ ಬಗ್ಗೆ ಮಾತನಾಡಿದ ಹಶಿಸ್, ಗುರುವಾರ ಅರಣ್ಯ ಪ್ರದೇಶದ ಬಳಿ ತಾಯಿ ಮತ್ತು ನಾಲ್ಕು ವರ್ಷದ ಮಗು ಅಲೆದಾಡುವುದನ್ನು ನೋಡಿದ್ದೇವು. ಈ ಸಂಬಂಧ ವಿಚಾರಿಸಿದಾಗ, ತನ್ನ ಇತರ ಮೂವರು ಮಕ್ಕಳು ಮತ್ತು ಅವರ ತಂದೆ ಆಹಾರವಿಲ್ಲದೆ ಗುಹೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿತ್ತು.

Wayanad cave rescue
ವಯನಾಡು ಭೂಕುಸಿತ ಪ್ರದೇಶಕ್ಕೆ ನಟ ಮೋಹನ್ ಲಾಲ್ ಭೇಟಿ; ಪುನರ್ವಸತಿ ಕಾರ್ಯಕ್ಕೆ 3 ಕೋಟಿ ರೂ. ನೆರವು ಘೋಷಣೆ

ಈ ಕುಟುಂಬವು ಬುಡಕಟ್ಟು ಸಮುದಾಯದ ವಿಶೇಷ ವಿಭಾಗಕ್ಕೆ ಸೇರಿದ್ದು, ಇದು ಸಾಮಾನ್ಯವಾಗಿ ಹೊರಗಿನವರೊಂದಿಗೆ ಸಂವಹನ ನಡೆಸುವುದನ್ನು ತಪ್ಪಿಸುತ್ತದೆ ಎಂದು ಹಶಿಸ್ ಹೇಳಿದ್ದಾರೆ. ಅವರು ಸಾಮಾನ್ಯವಾಗಿ ಅರಣ್ಯ ಉತ್ಪನ್ನಗಳ ಮೇಲೆ ಅವಲಂಬಿತರಾಗಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕೊಟ್ಟು ಕೊಳ್ಳುವಿಕೆಯ ಮೂಲಕ ಖರೀದಿಸುತ್ತಾರೆ. ಆದರೆ, ಭೂಕುಸಿತ ಮತ್ತು ಭಾರೀ ಮಳೆಯಿಂದಾಗಿ ಅವರು ಯಾವುದೇ ಆಹಾರವನ್ನು ಪಡೆಯಲು ಸಾಧ್ಯವಾಗದಂತಿದೆ ಎಂದು ಅವರು ಹೇಳಿದರು.

ಭಾರೀ ಮಳೆಯ ನಡುವೆ ಜಾರುವ ಮತ್ತು ಕಡಿದಾದ ಬಂಡೆಗಳ ಮೂಲಕ ಹಾದು ಹೋಗಬೇಕಾದ ತನ್ನ ಅಪಾಯಕಾರಿ ಪ್ರಯಾಣವನ್ನು ಅರಣ್ಯ ರೇಂಜ್ ಆಫೀಸರ್ ವಿವರಿಸಿದರು. 'ಮಕ್ಕಳು ದಣಿದಿದ್ದಾರೆ, ಮತ್ತು ನಾವು ನಮ್ಮೊಂದಿಗೆ ತೆಗೆದುಕೊಂಡು ಹೋದ ಆಹಾರ ಪದಾರ್ಥಗಳನ್ನು ನಾವು ಅವರಿಗೆ ನೀಡಿದ್ದೇವು. ನಂತರ, ಬಹಳ ಮನವೊಲಿಕೆಯ ನಂತರ, ಅವರ ತಂದೆ ನಮ್ಮೊಂದಿಗೆ ಬರಲು ಒಪ್ಪಿದರು. ನಾವು ಮಕ್ಕಳನ್ನು ನಮ್ಮ ದೇಹಕ್ಕೆ ಕಟ್ಟಿಕೊಂಡು ನಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದೇವು. ಜಾರು ಬಂಡೆಗಳನ್ನು ಹತ್ತಲು ಅಧಿಕಾರಿಗಳು ಮರಗಳು ಮತ್ತು ಬಂಡೆಗಳಿಗೆ ಹಗ್ಗಗಳನ್ನು ಕಟ್ಟಬೇಕಾಯಿತು ಎಂದರು.

ಅಟ್ಟಮಾಲದಲ್ಲಿರುವ ತಮ್ಮ ಸ್ಥಳೀಯ ಕಚೇರಿಗೆ ತಂಡ ಮರಳಿತು. ಅಲ್ಲಿ ಮಕ್ಕಳಿಗೆ ಆಹಾರ ಮತ್ತು ಬಟ್ಟೆ ಮತ್ತು ಬೂಟುಗಳನ್ನು ನೀಡಲಾಯಿತು. ಸದ್ಯ ಅಲ್ಲಿಯೇ ಇರಿಸಲಾಗಿದ್ದು, ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅರಣ್ಯಾಧಿಕಾರಿಗಳ ಸವಾಲಿನ ಪ್ರಯತ್ನಗಳನ್ನು ಶ್ಲಾಘಿಸಲು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸೆಕ್ಷನ್ ಫಾರೆಸ್ಟ್ ಆಫೀಸರ್ ಹಶಿಶ್, ಬೀಟ್ ಫಾರೆಸ್ಟ್ ಆಫೀಸರ್ ಬಿ ಎಸ್ ಜಯಚಂದ್ರನ್, ಕೆ ಅನಿಲ್ ಕುಮಾರ್ ಮತ್ತು ಆರ್ ಆರ್ ಟಿ (ರ್ಯಾಪಿಡ್ ರೆಸ್ಪಾನ್ಸ್ ಟೀಮ್) ಸದಸ್ಯ ಅನುಪ್ ಥಾಮಸ್ ಸೇರಿ ಏಳು ಕಿಲೋಮೀಟರ್ ಗಳಷ್ಟು ದೂರದ ಪ್ರಯಾಣ ನಡೆಸಿ ಕುಟುಂಬವನ್ನು ರಕ್ಷಿಸಿದರು. ಮಳೆ ತೀವ್ರಗೊಳ್ಳುತ್ತಿದ್ದಂತೆ, ಅರಣ್ಯ ಇಲಾಖೆಯು ವಯನಾಡ್‌ನಲ್ಲಿರುವ ಬುಡಕಟ್ಟು ಸಮುದಾಯದ ಹೆಚ್ಚಿನ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಈ ಕುಟುಂಬ ಕೆಲಕಾಲ ಕಾಡಿನೊಳಗೆ ವಾಸವಾಗಿತ್ತು ಎಂದು ಅಧಿಕಾರಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com