
ಕಲ್ಪೆಟ್ಟ: ಕೇರಳದ ವಯನಾಡು ಜಿಲ್ಲೆಯ ಚೂರಲ್ಮಲ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಬದುಕುಳಿದವರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಹಣದ ಸಮಸ್ಯೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಭೀಕರ ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೈಮಾನಿಕ ಸಮೀಕ್ಷೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಮೋದಿ, ರಾಜ್ಯ ಸರ್ಕಾರದಿಂದ ಹಾನಿಯ ಕುರಿತು ವಿವರವಾದ ವರದಿ ನೀಡುವಂತೆ ಕೋರಿದ್ದೇನೆ. ನಮಗೆ ವರದಿ ಬಂದ ನಂತರ ಸರ್ಕಾರವು ಅನುಕೂಲಕರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಪುನರ್ವಸತಿ ಪ್ಯಾಕೇಜ್ಗೆ ರಾಜ್ಯ ಮತ್ತು ಕೇಂದ್ರ ಎರಡೂ ಕೈಜೋಡಿಸಲಿವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ಕೇಂದ್ರ ಸಚಿವರು ಹಾಗೂ ಅಧಿಕಾರಿಗಳು ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. "ದೇಶ ಮತ್ತು ಸರ್ಕಾರ ಬದುಕುಳಿದವರೊಂದಿಗಿದೆ. ಸಂತ್ರಸ್ತರು ಒಬ್ಬಂಟಿಯಾಗಿಲ್ಲ ಎಂದು ನಾವು ಅವರಿಗೆ ತಿಳಿಸಲು ಬಯಸುತ್ತೇವೆ" ಎಂದರು.
1979 ರಲ್ಲಿ ಗುಜರಾತ್ನ ಮೋರ್ಬಿಯಲ್ಲಿ ಸಂಭವಿಸಿದ ದುರಂತದ ಸಂದರ್ಭದಲ್ಲಿ ಸ್ವಯಂಸೇವಕರಾಗಿ ತಮ್ಮ ಅನುಭವವನ್ನು ನೆನಪಿಸಿಕೊಂಡ ಮೋದಿ, ಬದುಕುಳಿದವರ ದುಃಖ ಅರ್ಥವಾಗುತ್ತಿದೆ. ದುರಂತಕ್ಕೆ ಬಲಿಯಾದವರ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ದೀರ್ಘಾವಧಿಯ ಯೋಜನೆಯ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ವಿ.ವೇಣು ಅವರು ಭೂಕುಸಿತ ಮತ್ತು ದುರಂತದ ನಂತರ ಕೈಗೊಂಡ ಕ್ರಮಗಳ ಕುರಿತು ಪ್ರಧಾನಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಕಲ್ಪೆಟ್ಟಾದ ಎಸ್.ಕೆ.ಎಂ.ಜೆ. ಶಾಲಾ ಮೈದಾನದಲ್ಲಿರುವ ಹೆಲಿಪ್ಯಾಡ್ಗೆ ಬಂದಿಳಿದ ಪ್ರಧಾನಿ ಮೋದಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಚೂರಲ್ಮಲಗೆ ತೆರಳಿದರು. ಭೂಕುಸಿತದಿಂದ ಹಾನಿಗೊಂಡ ಚೂರಲ್ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳನ್ನು ವೀಕ್ಷಿಸಿದರು.
Advertisement