
ಸೊಲ್ಲಾಪುರ: ಎನ್ ಸಿಪಿ ಶರದ್ಚಂದ್ರ ಪವಾರ್ ನಾಯಕ ಶರದ್ ಪವಾರ್ ಭಾನುವಾರ ಮರಾಠ ಹೋರಾಟಗಾರರ ಆಕ್ರೋಶವನ್ನು ಎದುರಿಸಬೇಕಾಯಿತು. ಸೊಲ್ಲಾಪುರ ಜಿಲ್ಲೆಯಲ್ಲಿ ಅವರ ಬೆಂಗಾವಲು ವಾಹನವನ್ನು ತಡೆಯಲಾಯಿತು. ಬಳಿಕ ಬಾರ್ಶಿ ಪಟ್ಟಣದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಕಪ್ಪು ಬಾವುಟ ಪ್ರದರ್ಶಿಸಲಾಯಿತು.
ಕುರ್ದುವಾಡಿ ಗ್ರಾಮದಲ್ಲಿ ಪವಾರ್ ಅವರ ಬೆಂಗಾವಲು ವಾಹನ ತಡೆದ ಪ್ರತಿಭಟನಾಕಾರರು, ಮರಾಠ ಮೀಸಲಾತಿ ವಿಷಯದಲ್ಲಿ ತಮ್ಮ ನಿಲುವು ಸ್ಪಷ್ಪಪಡಿಸುವಂತೆ ಒತ್ತಾಯಿಸಿದರು. ಆಗ ಮೀಸಲಾತಿಗೆ ತಮ್ಮ ಬೆಂಬಲವಿದೆ ಎಂದು ಪವಾರ್ ಹೇಳಿದರು. ಆದರೆ ಈ ವಿಷಯದ ಬಗ್ಗೆ ತಮ್ಮ ಮನಸ್ಸಿನಿಂದ ಅವರು ಮಾತನಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಬಾರ್ಶಿಯಲ್ಲಿ ಆಯೋಜಿಸಲಾಗಿದ್ದ ರ್ಯಾಲಿ ಸ್ಥಳಕ್ಕೆ ತೆರಳಿದ ಕೆಲ ಯುವಕರು, ಮೀಸಲಾತಿ ಪರ ಹೋರಾಟಗಾರ ಮನೋಜ್ ಜಾರಂಜ್ ಅವರನ್ನು ಶ್ಲಾಘಿಸಿ ಘೋಷಣೆಗಳನ್ನು ಎತ್ತಿದರು. ಪವಾರ್ ಭಾಷಣ ಮಾಡುವಾಗ ಕಪ್ಪು ಬಾವುಟವನ್ನೂ ಪ್ರದರ್ಶಿಸಿದರು.
ರ್ಯಾಲಿಯಲ್ಲಿ ಜಾರಂಗೆ ಬೆಂಬಲಿ ಘೋಷಣೆ ಕೂಗಿದ ನಾಲ್ವರು ಯುವಕರನ್ನು ಭದ್ರತಾ ಮತ್ತು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಸೊಲ್ಲಾಪುರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿಕ್ಷಣ ಮತ್ತು ಸರ್ಕಾರಿ ಹುದ್ದೆಗಳಲ್ಲಿ ಮರಾಠ ಸಮುದಾಯಕ್ಕೆ ಶೇ.10 ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ಫೆಬ್ರವರಿಯಲ್ಲಿ ಮಹಾರಾಷ್ಟ್ರ ವಿಧಾನಸಭೆ ಅಂಗೀಕರಿಸಿತ್ತು. ಆದರೆ, ಒಬಿಸಿ ವರ್ಗದಲ್ಲಿ ಮಠಾಠ ಸಮುದಾಯವನ್ನು ಸೇರ್ಪಡೆ ಮಾಡಬೇಕೆಂದು ಮನೋಜ್ ಜಾರಂಗೆ ಹೋರಾಟ ನಡೆಸುತ್ತಿದ್ದಾರೆ.
Advertisement